ಮತ್ತೊಮ್ಮೆ ಎಡವಿದ ಬಿಎಸ್‍ವೈ- ಸಿದ್ದರಾಮಯ್ಯರಿಂದ ರಾಜ್ಯದ ಜನರಿಗೆ ಅಪಮಾನ ಅಂದ್ರು ಯಡಿಯೂರಪ್ಪ

ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸಿಎಂ ಕುಮಾರಸ್ವಾಮಿ ಅನ್ನುವ ಬದಲು ಸಿಎಂ ಸಿದ್ದರಾಮಯ್ಯ ಅಂತ ಹೇಳುವ ಮೂಲಕ ಮತ್ತೊಮ್ಮೆ ಎಡವಿದ್ದಾರೆ.

ನಗರದಲ್ಲಿ ನಡೆದ ಬಿಜೆಪಿ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ ಎನ್ನುವ ಮೂಲಕ ಸಿದ್ದರಾಮಯ್ಯ ರಾಜ್ಯದ ಜನರಿಗೆ ಅಪಮಾನ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಕಣ್ಣಿಗೆ ಮಣ್ಣೆರುಚುವ ಕೆಲಸ ಮಾಡುತ್ತಿದ್ದಾರೆ ಅಂತ ಹೇಳಿದ್ದಾರೆ. ಈ ಮೂಲಕ ಬಿಎಸ್‍ವೈ ಅವರು ಇಂದು ಎರಡು ಬಾರಿ ಮುಖ್ಯಮಂತ್ರಿಯವರ ಹೆಸರನ್ನು ತಪ್ಪಾಗಿ ಹೇಳಿದ್ದಾರೆ.

ಬಿಎಸ್‍ವೈ ಅವರು ಸಿದ್ದರಾಮಯ್ಯ ಅವರ ಹೆಸರು ಹೇಳುತ್ತಿದ್ದಂತೆಯೇ ಕಾರ್ಯಕರ್ತರೊಬ್ಬರು ಕುಮಾರಸ್ವಾಮಿ ಹೆಸರು ಬರೆದುಕೊಟ್ಟಿದ್ದಾರೆ. ನಂತರ ಬಿಎಸ್‍ವೈ ತನ್ನ ಮಾತು ಸರಿಪಡಿಸಿಕೊಂಡಿದ್ದಾರೆ.

ನಾನೂ ಹೆಲಿಕಾಪ್ಟರ್ ಮೂಲಕ ಮಹಾಂತನಂದಾ ಸ್ವಾಮೀಜಿ ಅಂತಿಮ ದರ್ಶನಕ್ಕೆ ಹೋಗಿದ್ದೆ. ಇದಕ್ಕಾಗಿ ಸ್ವತಃ ರಾಜ್ಯಪಾಲರ ಅನುಮತಿಯನ್ನು ಪಡೆದುಕೊಂಡು ಹೋಗಿದ್ದೆ. ಆದರೆ ಇದನ್ನ ನೀವೂ ಪದೇಪದೇ ಈ ಹಣಕ್ಕೆ ಹೊಣೆ ಯಾರು ಅಂತೀರಾ? ಹೆಲಿಕಾಪ್ಟರ್ ತಿರುಗಾಡಿದ್ದ ಬಗ್ಗೆ ನನಗೆ ಯಾಕೆ ಕೇಳುತ್ತೀರಿ? ಕುಮಾರಸ್ವಾಮಿ ಅವರೇ, ಈ ಮಾತನ್ನ ನಿಮ್ಮ ಕಾರ್ಯದರ್ಶಿಗಳಿಗೆ ಕೇಳಬೇಕು. ಈ ಬಗ್ಗೆ ನೇರವಾದ ಬಹಿರಂಗವಾದ ಪತ್ರ ಬರೆಯುತ್ತೇನೆ. ಅಪ್ಪ ಮಕ್ಕಳು ಇಬ್ಬರು ಸತ್ಯ ಹರಿಶ್ಚಂದ್ರರಂತೆ ವರ್ತನೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿ ಸಿಎಂ ಕುಮಾರಸ್ವಾಮಿ ಹಾಗೂ ಹೆಚ್‍ಡಿಡಿ ಅವರನ್ನು ಟೀಕಿಸಿದ್ರು.

ಬೇಕಿದ್ದರೆ ನಾನೂ ಓಡಾಟ ಮಾಡಿದ ಖರ್ಚನ್ನು ನಾನೇ ಭರಿಸುತ್ತೇನೆ. ಇದನ್ನ ಕೂಡ ಪತ್ರದಲ್ಲಿ ಉಲ್ಲೇಖಿಸುತ್ತೇನೆ. ಸಾಲಮನ್ನಾ ಮಾಡುತ್ತೇನೆ ಅಂತ ಹೇಳಿದವರು ನೀವೇ? ಆದರೆ ಇದೀಗ ರಾಜಕೀಯ ದೊಂಬರಾಟ ನಡೆಸುತ್ತಿದ್ದೀರಾ? ಈ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ. ಇದಕ್ಕಾಗಿ ಹಂತಹಂತವಾಗಿ ಸಿದ್ಧತೆ ಮಾಡಿಕೊಳ್ಳುತ್ತೇವೆ. ಕುಮಾರಸ್ವಾಮಿ ಅಂಡ್ ಕಂಪನಿ ಏನಾಗಲಿದೆ ಅಂತ 15-20 ದಿನದಲ್ಲಿ ಗೊತ್ತಾಗಲಿದೆ. ನಿಮ್ಮ ಸರ್ಕಾರ ವಿಸರ್ಜಿಸಿ ಬನ್ನಿ ಮತ್ತೆ ಚುನಾವಣೆಗೆ ಹೋಗೋಣ. ಯಾರು ಹೆಚ್ಚು ಸ್ಥಾನ ಬರ್ತಾರೆ ಅಂತ ಗೊತ್ತಾಗುತ್ತೆ ಅಂತ ಸಿಎಂ ಗೆ ಬಿಎಸ್‍ವೈ ಸವಾಲು ಹಾಕಿದ್ರು.

ಕುಮಾರಸ್ವಾಮಿಯವರ ವಿಶ್ವಾಸ ಮತಚಯಾಚನೆಯ ವೇಳೆ ಬಿಎಸ್ ಯಡಿಯೂರಪ್ಪನವನವರು ಎಚ್‍ಡಿಕೆ ಹೆಸರನ್ನು ಹೇಳುವ ಬದಲು ಸಿಎಂ ಸಿದ್ದರಾಮಯ್ಯನವರ ಹೆಸರನ್ನು ಹೇಳಿ ಎಡವಟ್ಟು ಮಾಡಿಕೊಂಡಿದ್ದರು.

Comments

Leave a Reply

Your email address will not be published. Required fields are marked *