ಮಗಳನ್ನು ತನ್ನ ಮಗನಿಗೆ ಕೊಡಲಿಲ್ಲವೆಂದು ಕೊಡಲಿ, ರಾಡ್ ನಿಂದ ಹಲ್ಲೆ!

ಕೊಪ್ಪಳ: ಕ್ಷುಲ್ಲಕ ಕಾರಣಕ್ಕೆ ಮಾರಕಾಸ್ತ್ರದಿಂದ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಕಾರಟಗಿ ತಾಲೂಕು ಮೈಲಾಪುರ ಗ್ರಾಮದಲ್ಲಿ ನಡೆದಿದೆ.

ತನ್ನ ಮಗನಿಗೆ ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದ ಕುಟುಂಬದ ಮೇಲೆ ರಾಮಣ್ಣ ತನ್ನ ಮಕ್ಕಳೊಂದಿಗೆ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಅದೇ ಗ್ರಾಮದ ನಾಗಪ್ಪ ಬಸಾಪಟ್ಟಣ ಮೇಲೆ ಹಲ್ಲೆ ಮಾಡಿದ್ದು, ರಾಮಣ್ಣ ತಳವಾರ ಮತ್ತು ಆತನ ಮಕ್ಕಳು ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆ.

ಮೈಲಾಪುರ ಗ್ರಾಮದ ನಾಗಪ್ಪನ ಸಹೋದರ ಕೃಷ್ಣಪ್ಪನ ಮಗಳನ್ನು ತನ್ನ ಮಗನಿಗೆ ಮದುವೆ ಮಾಡಿಕೊಡುವಂತೆ ರಾಮಣ್ಣ ತಳವಾರ ಕೇಳಿದ್ದಾನೆ. ತಮ್ಮ ಮಗಳನ್ನು ರಾಮಣ್ಣನ ಮಗನಿಗೆ ಕೊಡುವುದಕ್ಕೆ ನಾಗಪ್ಪ ಮತ್ತು ಕೃಷ್ಣಪ್ಪ ಸಹೋದರು ನಿರಾಕರಿಸಿದ್ದಾರೆ. ಈ ಕಾರಣಕ್ಕೆ ಇಂದು ಬೆಳಗ್ಗೆ ಕೊಡಲಿ ಮತ್ತು ರಾಡ್ ನಿಂದ ನಾಗಪ್ಪನ ಮೇಲೆ ರಾಮಣ್ಣ ಮತ್ತು ಆತನ ಮಕ್ಕಳು ಹಲ್ಲೆ ಮಾಡಿದ್ದಾರೆ.

ಈ ಘಟನೆಯಿಂದ ನಾಗಪ್ಪನ ತಲೆಗೆ ಬಲವಾದ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಗೆ ರವಾನಿಸಲಾಗಿದೆ. ಈ ಘಟನೆ ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Comments

Leave a Reply

Your email address will not be published. Required fields are marked *