ಕೃಷ್ಣಾದಲ್ಲಿ ಮುಖ್ಯಮಂತ್ರಿ ಹೆಚ್‍ಡಿಕೆ ಭೇಟಿ ಅವಕಾಶಕ್ಕೆ ಸಮಯ ನಿಗದಿ!

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಇರುವ ದಿನಗಳಲ್ಲಿ ಪ್ರತಿದಿನ ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ಸಾರ್ವಜನಿಕರು, ಗಣ್ಯರ ಭೇಟಿಗೆ ಲಭ್ಯರಿರುತ್ತಾರೆ.

ಅವರ ಜೆಪಿ ನಗರದ ಖಾಸಗಿ ನಿವಾಸದಲ್ಲಿ ಜನದಟ್ಟಣಿಯಿಂದ ಬಡಾವಣೆಯ ಇತರ ನಿವಾಸಿಗಳಿಗೆ ಅಡಚಣಿಯಾಗುವುದರಿಂದ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಇಚ್ಚಿಸುವವರು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗುವಂತೆ ಮುಖ್ಯಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಕುಮಾರಸ್ವಾಮಿಯವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಜನತಾ ದರ್ಶನವನ್ನು ಆರಂಭಿಸಿದ್ದರು. ಈಗ ಈ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಇದನ್ನು ಮುಂದುವರಿಸಿದ್ದಾರೆ.

ರಾಜ್ಯದಲ್ಲಿ ಕುಮಾರಪರ್ವ ಆರಂಭ ಆಗಿದೆ. ಈ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮುಂದಿರೋ ಸವಾಲು ಶುಕ್ರವಾರ ಸದನದಲ್ಲಿ ವಿಶ್ವಾಸಮತ ಗೆಲ್ಲೋದು. ಈ ಹಿನ್ನೆಲೆಯಲ್ಲಿ ಉಭಯ ಪಕ್ಷಗಳು ತಮ್ಮ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕಸರತ್ತು ಮುಂದುವರೆಸಿದ್ದಾರೆ. ಜೆಡಿಎಸ್ ಶಾಸಕರು ಇರೋ ರೆಸಾರ್ಟ್‍ಗೆ ತೆರಳಿದ ಕುಮಾರಸ್ವಾಮಿ ಅಲ್ಲೇ ರಾತ್ರಿ ಕಳೆದಿದ್ದಾರೆ.

ಯಾವುದೇ ಆಮಿಷಗಳಿಗೆ ಬಲಿಯಾಗಬೇಡಿ ಅಂತಾ ಕಿವಿ ಮಾತು ಹೇಳಿದ್ದಾರೆ. ಅತ್ತ ಕಾಂಗ್ರೆಸ್ ಶಾಸಕರಿಗೂ ಇದೇ ರೀತಿಯ ಕಿವಿ ಮಾತನ್ನು ನಾಯಕರು ಹೇಳ್ತಿದ್ದಾರೆ. ನಿನ್ನೆ ಸೋನಿಯಾ ಮತ್ತು ರಾಹುಲ್ ಖುದ್ದು ಶಾಸಕರನ್ನು ಭೇಟಿ ಮಾಡಿ ನಮ್ಮೊಂದಿಗೆ ಇರಿ ಎಂದಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಮುಖ ನಾಯಕರು ಸಂಜೆ ನಗರದ ಖಾಸಗಿ ಹೋಟೆಲ್‍ನಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ.

ವಿಶ್ವಾಸಮತಯಾಚನೆ ಹಿನ್ನೆಲೆಯಲ್ಲಿ ಅನುರಿಸಬೇಕಾದ ತಂತ್ರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಮಧ್ಯಾಹ್ನ ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಇನ್ನು ಸ್ಪೀಕರ್ ಆಯ್ಕೆಗೆ ವಿಧಾನಸಭೆ ಸಚಿವಾಲಯದಿಂದ ಅಧಿಸೂಚನೆ ಪ್ರಕಟವಾಗಿದೆ. ಮಧ್ಯಾಹ್ನ 12 ಗಂಟೆಯೊಳಗೆ ನಾಮಪತ್ರ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ನಾಳೆ ಸ್ಪೀಕರ್ ಆಯ್ಕೆಗೆ ಚುನಾವಣೆ ನಡೆಯಲಿದೆ.

Comments

Leave a Reply

Your email address will not be published. Required fields are marked *