ಪಾಕ್ ಉದ್ಧಟತನಕ್ಕೆ ಭಾರತದ ಪ್ರತ್ಯುತ್ತರ: ದಯವಿಟ್ಟು ದಾಳಿ ನಿಲ್ಲಿಸಿ ಎಂದ ಪಾಕ್ – ವಿಡಿಯೋ ನೋಡಿ

ಶ್ರೀನಗರ: ಗಡಿ ಪ್ರದೇಶದಲ್ಲಿ ಭಾರತದ ಪ್ರತ್ಯುತ್ತರಕ್ಕೆ ಹೆದರಿ ನಡುಗಿದ ಪಾಕ್ ದಾಳಿ ನಿಲ್ಲಿಸುವಂತೆ ಭಾರತಕ್ಕೆ ಮನವಿ ಮಾಡಿದೆ.

ಈ ಕುರಿತು ಮಾಹಿತಿ ನೀಡಿರುವ ಗಡಿ ನಿಯಂತ್ರಣ ಪಡೆ (ಬಿಎಸ್‍ಎಫ್) ಹಿರಿಯ ಅಧಿಕಾರಿ, ಗಡಿ ಪ್ರದೇಶದಲ್ಲಿ ಪಾಕಿಸ್ತಾನ ನಡೆಸಿದ ಅಪ್ರಚೋದಿತ ದಾಳಿಗೆ ಭಾರತದ ಬಿಎಸ್‍ಎಫ್ ಯೋಧರು ತಕ್ಕ ಉತ್ತರ ನೀಡಿದ್ದಾರೆ. ಸದ್ಯ ಪಾಕ್ ಬಿಎಸ್‍ಎಫ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ದಾಳಿ ನಿಲ್ಲಿಸುವಂತೆ ಮನವಿ ಮಾಡಿದೆ ಎಂದು ಹೇಳಿದ್ದಾರೆ.

ದೇಶಾದ್ಯಂತ ರಂಜಾನ್ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಶಾಂತಿ ಕಾಪಾಡಿಕೊಳ್ಳುವಂತೆ ಸರ್ಕಾರ ಸೈನ್ಯಕ್ಕೆ ಸೂಚನೆ ನೀಡಿತ್ತು. ಇದನ್ನೇ ಅಸ್ತ್ರವಾಗಿ ಬಳಕೆ ಮಾಡಿಕೊಂಡ ಪಾಕ್ ಕಳೆದ ಮೂರು ದಿನಗಳಿಂದ ಅಪ್ರಚೋದಿತ ದಾಳಿ ನಡೆಸಿತ್ತು. ಪರಿಣಾಮ ಭಾರತದ ಇಬ್ಬರು ನಾಗರೀಕರು ಸೇರಿದಂತೆ ಜಮ್ಮುವಿನ ಅರ್ನಿಯಾ ಸೆಕ್ಟರ್ ನಲ್ಲಿ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿ, ಒಬ್ಬರು ಯೋಧರು ಗಾಯಗೊಂಡಿದ್ದರು.

ಸದ್ಯ ಬಿಎಸ್‍ಎಫ್ ಬಿಡುಗಡೆ ಮಾಡಿರುವ ವಿಡಿಯೋ ಪ್ರಕಾರ ಅಂತರಾಷ್ಟ್ರೀಯ ಗಡಿಯ ಉದ್ದಕ್ಕೂ ಪಾಕ್ ನಿರ್ಮಿಸಿದ್ದ ಎರಡು ಬಂಕರ್ ಮೇಲೆ ಭಾರತ ದಾಳಿ ನಡೆಸಿ ನಾಶಪಡಿಸಿದೆ. ಇದಕ್ಕೂ ಮುನ್ನ ಪಾಕ್ ಭಾರತದ ವಿರುದ್ಧ ಶೆಲ್ ದಾಳಿ ನಡೆಸಿತ್ತು.

ಮೇ 15 ನಡೆದ ದಾಳಿಯಲ್ಲಿ ಯೋಧ ದೇವೇಂದ್ರ ಸಿಂಗ್ ಹುತಾತ್ಮರಾಗಿದ್ದರು. ಅಂತರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ನಡೆಸಿದ 700 ಅಪ್ರಚೋದಿತ ದಾಳಿಯಲ್ಲಿ 18 ರಕ್ಷಣಾ ಪಡೆಯ ಸಿಬ್ಬಂದಿ ಸೇರಿದಂತೆ ಒಟ್ಟು 34 ಮಂದಿ ಸಾವನ್ನಪ್ಪಿದ್ದಾರೆ.

Comments

Leave a Reply

Your email address will not be published. Required fields are marked *