ಶನಿವಾರ ರಾತ್ರಿ ಎಚ್‍ಡಿಕೆಗೆ ಮುಖ್ಯವಾದ ಒಂದು ಸೂಚನೆ ಕೊಟ್ಟ ಎಚ್‍ಡಿಡಿ!

ಬೆಂಗಳೂರು: ಭಾರೀ ಸಂಚಲನ ಮೂಡಿಸಿದ್ದ ರಾಜ್ಯ ರಾಜಕಾರಣಕ್ಕೆ ಕೊನೆಗೂ ತೆರೆಬಿದ್ದಿದೆ. ಹೆಚ್ ಡಿ ಕುಮಾರಸ್ವಾಮಿ ಅವರು ಬುಧವಾರ ಪ್ರಮಾಣವಚನ ಸ್ವೀಕಾರ ಮಾಡಲಿದ್ದು, ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಹೆಚ್‍ಡಿಕೆಗೆ ಸೂಚನೆ ನೀಡಿದ್ದಾರೆ.

ಮೇ 23ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರೋ ಹೆಚ್.ಡಿ ಕುಮಾರಸ್ವಾಮಿ ಅವರು ನಿನ್ನೆ ರಾತ್ರಿ ತಂದೆ ಹೆಚ್.ಡಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ರು. ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಹೆಚ್.ಡಿ ದೇವೇಗೌಡರ ನಿವಾಸ ಅಮೋಘಕ್ಕೆ ಭೇಟಿ ಕೊಟ್ಟ ಕುಮಾರಸ್ವಾಮಿ ತಮ್ಮ ತಂದೆಯ ಆಶೀರ್ವಾದ ಪಡೆದರು.

ನಿನ್ನೆ ತಡ ರಾತ್ರಿ ಸುಮಾರು 2 ಗಂಟೆಗಳ ಕಾಲ ದೇವೇಗೌಡರ ಜೊತೆ ಮಾತುಕತೆ ನಡೆಸಿದ ಕುಮಾರಸ್ವಾಮಿ ಅವರು, ಪ್ರಮಾಣವಚನ ಸ್ವೀಕರಿಸುವವರೆಗೂ ಎಲ್ಲಾ ಶಾಸಕರನ್ನು ಹಿಡಿದಿಟ್ಟುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಜೆಡಿಎಸ್ ನ ಯಾವ ಶಾಸಕರಿಗೆ ಮಂತ್ರಿಗಿರಿಯನ್ನು ಕೊಡಬೇಕು ಅನ್ನೋದ್ರ ಬಗ್ಗೆಯೂ ಚರ್ಚೆಯಾಗಿದ್ದು, ಕಾಂಗ್ರೆಸ್ ನ ಯಾವ ಯಾವ ನಾಯಕರನ್ನು ಕ್ಯಾಬಿನೆಟ್ ಗೆ ಸೇರಿಸಬೇಕು ಅನ್ನೋದ್ರ ಬಗ್ಗೆಯೂ ಮಾತುಕತೆ ನಡೆದಿದೆ ಎನ್ನಲಾಗಿದೆ.

ಜೆಡಿಎಸ್ 15 ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ನಿರ್ಧರಿಸಿದ್ದು, ಇಂದೂ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರೊಂದಿಗೆ ಚರ್ಚೆ ನಡೆಯುವ ಸಾಧ್ಯತೆಗಳಿವೆ. ಚರ್ಚೆ ಬಳಿಕ ಹೆಚ್‍ಡಿಕೆ ಇಂದು ಮಧ್ಯಾಹ್ನ ಮೇಲೆ ಎಚ್‍ಎಎಲ್ ಏರ್ ಪೋರ್ಟ್  ನಿಂದ ತಮಿಳುನಾಡಿನ ಶ್ರೀರಂಗಂ ದೇವಸ್ಥಾನಕ್ಕೆ ಹೋಗೋ ಪ್ಲಾನ್ ಮಾಡಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ದೇವೇಗೌಡರ ಕುಟುಂಬ ಅತಿಯಾಗಿ ನಂಬುವ ದೈವ ಶ್ರೀರಂಗಮ್ ಹಾಗೂ ತಿರುಪತಿಗೆ ಕುಮಾರಸ್ವಾಮಿ ಹಾಗೂ ರೇವಣ್ಣ ಜೊತೆಯಾಗಿ ತೆರಳಲಿದ್ದಾರೆ. ಚುನಾವಣೆಗೂ ಮುನ್ನ ಜೆಡಿಎಸ್ ಅಭ್ಯರ್ಥಿಗಳ ಬಿ ಫಾರಂಗೂ ಸಹ ಇಲ್ಲಿಯೇ ಪೂಜೆ ಮಾಡಿಸಲಾಗಿತ್ತು. ದೇವೇಗೌಡರು ಸಹ ಈ ದೇವಸ್ಥಾನಗಳಿಗೆ ಭೇಟಿಕೊಡುತ್ತಲೇ ಇರುತ್ತಾರೆ. ಹೀಗಾಗಿ ಕುಮಾರಸ್ವಾಮಿ ಹಾಗೂ ರೇವಣ್ಣ ಇಂದು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ.

Comments

Leave a Reply

Your email address will not be published. Required fields are marked *