ಜನರ ಶ್ರಮದ ಹಣ ಕೋಟ್ಯಾಧಿಪತಿಗಳ ಕೈ ಸೇರುತ್ತಿದೆ: ಮೋದಿ ವಿರುದ್ಧ ರಾಹುಲ್ ಕಿಡಿ

ಕಾರವಾರ: ಜನಸಾಮಾನ್ಯರ ಬೆವರ ಶ್ರಮ ಜನರಿಗೇ ಸೇರಬೇಕು ಆದರೆ ಬಿಜೆಪಿ ಇದನ್ನ ಬೇರೆ ರೀತಿ ಅರ್ಥೈಸಿದೆ. ಜನರ ಶ್ರಮದ ಹಣ ಕೋಟ್ಯಾದಿಪತಿಗಳ ಕೈ ಸೇರುವಂತೆ ಮಾಡುತ್ತಿದೆ. ಇದು ಬಿಜೆಪಿಯ ಜನಪರ ಕಾಳಜಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಂಕೋಲಾದ ರೋಡ್ ಶೋ ನಲ್ಲಿ ಮಾತನಾಡಿದ ಅವರು, ಮೋದಿ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಾರೆ. ಆದರೆ 9 ಸಾವಿರ ಕೋಟಿ ದೋಚಿ ಹೋದ ನೀರವ್ ಮೋದಿ ಬಗ್ಗೆ ಏನೂ ಹೇಳಲ್ಲ. ಬಿಜೆಪಿಯವರು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪ ಜೈಲಿಗೆ ಹೋಗಿದ್ದರು. ಅವರ ಬೆಂಬಲಿಗರೂ ಹೋಗಿದ್ದಾರೆ. ಇಂತಹವರ ಜೊತೆ ಮೋದಿ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

2 ಕೋಟಿ ಜನರಿಗೆ ಮೋದಿ ಉದ್ಯೋಗ ನೀಡುತ್ತೇನೆ ಎಂದಿದ್ದರು. ಭರವಸೆ ಮಾತ್ರ ನೀಡಿದರೆ ಹೊರತು ಉದ್ಯೋಗ ನೀಡಿಲ್ಲ. ಬಿಸಿಲ ಬೇಗೆಯಲ್ಲಿ ಪಕ್ಷ ಬೆಂಬಲಿಸಲು ಬಂದ ಎಲ್ಲರಿಗೂ ಕೃತಜ್ಣತೆ ಸಲ್ಲಿಸಿದ ರಾಹುಲ್ ಚುನಾವಣೆಯಲ್ಲಿ ಬಿಜೆಪಿ ಆರ್‍ಎಸ್‍ಎಸ್ ಹಾಗೂ ಕಾಂಗ್ರೆಸ್ ನಡುವೆ ವಿಚಾರಾಧಾರಿತ ಹೋರಾಟ ನಡೆಯುತ್ತಿದೆ ಎಂದು ಹೇಳಿದರು.

ಕಳಂಕಿತ ವ್ಯಕ್ತಿ ಯನ್ನ ಬಿಜೆಪಿ ಸಿಎಂ ಅಂತ ಘೋಷಿಸಿದೆ. ಲೂಟಿಕೋರರಿಗೆ ಅಧಿಕಾರ ಕೊಡಬೇಕಾ. ನುಡಿದಂತೆ ನಡೆದ ನಮ್ಮ ಸರ್ಕಾರವನ್ನ ಬೆಂಬಲಿಸಿ ಎಂದು ಸಿಎಂ ಸಿದ್ದರಾಮಯ್ಯನವರು ಜನರಲ್ಲಿ ವಿನಂತಿ ಮಾಡಿಕೊಂಡರು.

ಜನಪರ ಯೋಜನೆ ನೀಡಿದ ನಮ್ಮ ಪಕ್ಷಕ್ಕೆ ಮತ ನೀಡಿ ಮತ್ತೆ ಅವಕಾಶ ಕೊಡಿ. ಆಶೀರ್ವಾದ ಮಾಡಿ ಕಾಂಗ್ರೆಸ್ ಗೆಲ್ಲಿಸಿದರೆ ದೇಶದ ರಾಜಕಾರಣ ಬದಲಾಯಿಸಲು ಸಾಧ್ಯವಾಗತ್ತದೆ. ಕೋಮುವಾದಿ ಸರ್ಕಾರವನ್ನ ಕೇಂದ್ರದಿಂದ ಮುಂದಿನ ಬಾರಿ ಕೆಳಗಿಳಿಸಲು ನಮಗದು ಶಕ್ತಿ ಕೊಡತ್ತದೆ. ಹಾಗಾಗಿ ನೀವೆಲ್ಲಾ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ. ರಾಹುಲ್ ಪ್ರಧಾನಿಯನ್ನಾಗಿಸಲು ಸಹಕರಿಸಿ ಎಂದು ಸಿಎಂ ಮನವಿ ಮಾಡಿದರು.

ದಿನಕರ್ ದೇಸಾಯಿ ರಸ್ತೆಯಲ್ಲಿರುವ ಕಾಮತ್ ಪ್ಲಸ್ ಹೋಟೆಲ್ ನಲ್ಲಿ ಕರಾವಳಿ ವಿಶೇಷ ಖಾದ್ಯ ವಾದ ಚಿಕನ್ ಕಬಾಬ್, ರಸಂ, ತಂದೂರಿ ಕಬಾಬ್, ವೆಜ್ ಕುರ್ಮಾ, ಚಿಕನ್ ಮಸಾಲ, ಗ್ರೀನ್ ಸಾಲಡ್, ಬಟರ್ ಮಿಲ್ಕ್, ಸೋಡ ಶರಬತ್ ತಂಪುಪಾನಿಯವನ್ನು ರಾಹುಲ್ ಸವಿದರು.

ಕುಮಟಾ ಮಾರ್ಗದ ರಾಷ್ಟ್ರೀಯ ಹೆದ್ದಾರಿ 66 ರ ಕುಮಟಾ – ಶಿರಸಿ ಕ್ರಾಸ್ ಬಳಿ ಇರುವ ಉಡುಪಿ ಹೋಟೆಲ್ ನಲ್ಲಿ ಚಾ ಸವಿದರು. ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಆರ್.ವಿ ದೇಶಪಾಂಡೆ ಪ್ರಮುಖ ಮುಖಂಡರು ರಾಹುಲ್ ಜೊತೆಗಿದ್ದರು.

Comments

Leave a Reply

Your email address will not be published. Required fields are marked *