ಜನಾರ್ದನ ಪೂಜಾರಿಯವರ ಕಾಲು ಮುಟ್ಟಿ ಆಶೀರ್ವಾದ ಕೋರಿದ ರಮಾನಾಥ ರೈ

ಮಂಗಳೂರು: ಬಂಟ್ವಾಳ ಕ್ಷೇತ್ರದ ಶಾಸಕರು ಹಾಗೂ ಈ ಬಾರಿ ಅಭ್ಯರ್ಥಿಯೂ ಆಗಿರುವ ಸಚಿವ ರಮಾನಾಥ ರೈ ಅವರು ಇಂದು ಹಿರಿಯ ಕಾಂಗ್ರೆಸಿಗ ಜನಾರ್ದನ ಪೂಜಾರಿ ಅವರ ಮನೆಗೆ ಭೇಟಿ ನೀಡಿದ್ದರು.

ನಾಳೆ ನಾಮಪತ್ರ ಸಲ್ಲಿಸಲಿರುವ ಸಚಿವರು ಅದಕ್ಕೂ ಮುನ್ನ ಜನಾರ್ದನ ಪೂಜಾರಿ ಅವರ ಆಶೀರ್ವಾದ ಪಡೆದರು. ರಮಾನಾಥ ರೈ ತಮ್ಮನ್ನು ನಿಂದಿಸಿದರೆಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಜನಾರ್ದನ ಪೂಜಾರಿ ಅತ್ತಿದ್ದರು. ಇದೇ ವಿಚಾರವಾಗಿ ಕ್ಷೇತ್ರದ ಬಿಲ್ಲವ ಮತದಾರರಲ್ಲಿ ರೈ ವಿರುದ್ಧ ಆಕ್ರೋಶ ಮೂಡುವಂತಾಗಿತ್ತು.

ಪೂಜಾರಿಯವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಿದ್ದೇ ರಮಾನಾಥ ರೈ ಎಂಬ ಆರೋಪವೂ ಕೇಳಿಬಂದಿತ್ತು. ಆ ನಂತರ ಒಂದು ವರ್ಷ ಕಾಲ ಜನಾರ್ದನ ಪೂಜಾರಿ ಮತ್ತು ರಮಾನಾಥ ರೈ ನಡುವೆ ಅಂತರ ಕಂಡುಬಂದಿತ್ತು.

ಚುನಾವಣೆ ಹೊಸ್ತಿಲಲ್ಲಿ ಸಚಿವ ರಮಾನಾಥ ರೈಯವರು ಜನಾರ್ದನ ಪೂಜಾರಿಯವರ ಕಾಲು ಮುಟ್ಟಿ ಆಶೀರ್ವಾದ ಕೋರಿದ್ದಾರೆ. ವೈಮನಸ್ಸು ಏನಿದ್ದರೂ, ಪೂಜಾರಿಯವರು ರಮಾನಾಥ ರೈ ಭೇಟಿ ಸಂದರ್ಭ ತೋರಿಸಿಕೊಂಡಿಲ್ಲ. ಬೆಂಬಲಿಗರ ಜೊತೆ ಮನೆಗೆ ಬಂದ ರೈ ಅವರನ್ನು ವಾಹನದ ವರೆಗೂ ಬಂದು ಬೀಳ್ಕೊಟ್ಟಿದ್ದಾರೆ.

Comments

Leave a Reply

Your email address will not be published. Required fields are marked *