ಜಾತ್ರೆಯ ಫ್ಲೆಕ್ಸ್ ಕಟ್ಟುವ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ಬೆಂಗಳೂರು: ಫ್ಲೆಕ್ಸ್ ಕಟ್ಟುವ ವಿಚಾರದಲ್ಲಿ ನಡೆದ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದ ಹೊರವಲಯದ ನೆಲಮಂಗಲ ತಾಲೂಕಿನ ರೈಲ್ವೆ ಗೊಲ್ಲಹಳ್ಳಿ ಗೇಟ್ ನ ಮಾರುತಿ ಬಡಾವಣೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.

25 ವರ್ಷದ ಮಾರುತಿ ಕೊಲೆಯಾದ ಯುವಕ. ಬಯಲಾಂಜನೇಯ ಸ್ವಾಮಿಯ ಜಾತ್ರೆಯ ನಿಮಿತ್ತ ದೇವಾಲಯದ ಮುಂಭಾಗ ಹಾಗೂ ಗ್ರಾಮದಲ್ಲಿ ಫ್ಲೆಕ್ಸ್ ಕಟ್ಟುವ ವಿಚಾರದಲ್ಲಿ ಎರಡು ಗುಂಪಿನ ಮಧ್ಯೆ ಗಲಾಟೆ ನಡೆದು, ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ.

ಇಂದು ಗ್ರಾಮದಲ್ಲಿ ಆಂಜನೇಯ ರಥೋತ್ಸವವನ್ನ ಹಮ್ಮಿಕೊಳ್ಳಲಾಗಿತ್ತು. ರಥೋತ್ಸವದ ಹಿನ್ನೆಲೆಯಲ್ಲಿ ಸೋಮವಾರ ಗ್ರಾಮದ ಯುವಕರು ಸಿದ್ಧತೆಯಲ್ಲಿ ತೊಡಗಿಕೊಂಡಿದ್ರು. ಈ ವೇಳೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದ್ದು, ಜಗಳ ತಾರಕ್ಕೇರಿ ಮಾರುತಿಗೆ ಚಾಕುವಿನಿಂದ ಇರಿಯಲಾಗಿದೆ. ನಗರದ ಬೋನ್ ಮಿಲ್ ನಿವಾಸಿಗಳಾದ ರವಿ ಮತ್ತು ಆತನ ಸಹಚರರು ಕೃತ್ಯ ನಡೆಸಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಘಟನೆಯಲ್ಲಿ ಮಾರುತಿ ಜೊತೆಯಲ್ಲಿದ್ದ ಶಶಿಕುಮಾರ್ ಎಂಬ ಯುವಕನ ಮೇಲೂ ಹಲ್ಲೆ ನಡೆದಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಈ ಸಂಬಂಧ ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

Comments

Leave a Reply

Your email address will not be published. Required fields are marked *