ಸಿದ್ದರಾಮಯ್ಯ ಸರ್ಕಾರದ ಟ್ರಾನ್ಸ್ ಫಾರ್ಮರ್ ಸುಟ್ಟುಹೋಗಿದೆ, ಅದನ್ನು ಬದಲಿಸುವ ಬದಲು ಕಿತ್ತು ಬಿಸಾಕಿ: ಅಮಿತ್ ಶಾ

ಶಿವಮೊಗ್ಗ: ಬೆಂಗಳೂರಿನಲ್ಲಿರುವ ಸಿದ್ದರಾಮಯ್ಯ ಸರ್ಕಾರದ ಟ್ರಾನ್ಸ್ ಫಾರ್ಮರ್ ಸುಟ್ಟುಹೋಗಿದೆ, ಅದನ್ನು ಬದಲಿಸುವ ಬದಲು ಕಿತ್ತು ಬಿಸಾಕಿ ಎಂದು ಬಿಜೆಪಿ ರಾಷ್ಟಾಧ್ಯಕ್ಷ ಅಮಿತ್ ಶಾ ಸಿಎಂ ಸಿದ್ದರಾಮಯ್ಯ ವಿರುದ್ಧ ಕಟುವಾಗಿ ಕಿಡಿಕಾರಿದ್ದಾರೆ.

ಶಿವಮೊಗ್ಗದಲ್ಲಿ ಗಾಂಧಿ ಬಜಾರ್ ರಸ್ತೆಯಲ್ಲಿ ಭರ್ಜರಿ ರೋಡ್ ಶೋ ನಡೆಸಿ ಮಾತನಾಡಿದ ಅವರು, ಮೋದಿ ದೊಡ್ಡವಿದ್ಯುತ್ ಘಟಕ ಇದ್ದಂತೆ. ಈ ವಿದ್ಯುತ್ ಪಡೆದು ಮನೆಗೆ ಪೂರೈಸುವ ಟ್ರಾನ್ಸ್ ಫಾರ್ಮರ್ ಇದ್ದಂತೆ ಸಿದ್ದರಾಮಯ್ಯ. ಬೆಂಗಳೂರಿನಲ್ಲಿರುವ ಸಿದ್ದರಾಮಯ್ಯ ಟ್ರಾನ್ಸ್ ಫಾರ್ಮರ್ ಸುಟ್ಟು ಹೋಗಿದೆ. ಅದನ್ನು ಕಿತ್ತು ಹಾಕಿ ಹೊಸದಾಗಿ ಯಡಿಯೂರಪ್ಪ ಟ್ರಾನ್ಸ್ ಫಾರ್ಮರ್ ತನ್ನಿ. ಆಗ ಇಡೀ ರಾಜ್ಯಕ್ಕೆ ಸಮರ್ಪಕ ವಿದ್ಯುತ್ ಸರಬರಾಜಗುತ್ತದೆ ಎಂದರು.

ಯಾವಾಗ ಬಿಎಸ್‍ವೈ ಅಧಿಕಾರಕ್ಕೆ ಬರುತ್ತಾರೋ ಅಂದು ಇಡೀ ರಾಜ್ಯಕ್ಕೆ ಸಮರ್ಪಕ ವಿದ್ಯುತ್ ಸರಬರಾಜು ಆಗುತ್ತದೆ. ಸಿದ್ದರಾಮಯ್ಯ ಅವರ ಸರ್ಕಾರ ಭ್ರಷ್ಟಾಚಾರ ಸರ್ಕಾರ ಎಂಬುದಕ್ಕೆ ಸಿಎಂ 40 ಲಕ್ಷ ರೂ. ಮೌಲ್ಯದ ವಾಚ್ ಹಾಕಿರುವುದೇ ಸಾಕ್ಷಿ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರ ಇದುವರೆಗೂ 112 ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳು ಜನರಿಗೆ ತಲುಪಿಸುವಲ್ಲಿ ಸಿದ್ದರಾಮಯ್ಯ ಅಡ್ಡಿಯಾಗಿದ್ದಾರೆ. ಐದು ವರ್ಷದ ಸಿದ್ದರಾಮಯ್ಯ ಅವರ ಆಡಳಿತ ಅವಧಿಯಲ್ಲಿ ಏನೂ ಕೆಲಸ ಮಾಡಿಲ್ಲ. ಕಾಂಗ್ರೆಸ್ ಸರ್ಕಾರದವರು ಕೇವಲ ನಿದ್ದೆ ಮಾಡಿದ್ದಾರೆ. ಸಿದ್ದರಾಮಯ್ಯರಂತ ನಟರನ್ನು ನನ್ನ ಜೀವನದಲ್ಲೇ ನೋಡಿಲ್ಲ. ಒಂದೇ ಒಂದು ಕೆಲಸ ಆಗದಿದ್ದರೂ ದೆಹಲಿಗೆ ಹೋಗಿ ಇಡೀ ರಾಷ್ಟ್ರದಲ್ಲಿ ನಾನೊಬ್ಬನೇ ಅಭಿವೃದ್ಧಿ ಮಾಡುತ್ತಿದ್ದೇನೆ ಎಂದು ಪೋಸ್ ಕೊಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದೇ ಮೊದಲ ಬಾರಿಗೆ ಯಡಿಯೂರಪ್ಪ ತವರಲ್ಲಿ ಪಕ್ಷದ ಪರ ಪ್ರಚಾರ ಮಾಡಿದ ಅಮಿತ್ ಶಾ, ಶಿವಮೊಗ್ಗದ ರಾಮಣ್ಣ ಶೆಟ್ಟಿ ಪಾರ್ಕ್ ನಿಂದ ಗೋಪಿ ಸರ್ಕಲ್ ವರೆಗೂ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ಶಿವಪ್ಪ ನಾಯಕ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

Comments

Leave a Reply

Your email address will not be published. Required fields are marked *