ನಾಲ್ಕನೇ ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್‍ಗೆ 7 ವರ್ಷ ಜೈಲು

ನವದೆಹಲಿ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್‍ಗೆ ನಾಲ್ಕನೇ ಮೇವು ಹಗರಣ ಪ್ರಕರಣದಲ್ಲಿ 7 ವರ್ಷ ಜೈಲು ಶಿಕ್ಷೆ ಜೊತೆಗೆ 30 ಲಕ್ಷ ರೂ. ದಂಡ ವಿಧಿಸಲಾಗಿದೆ.

ದುಮ್ಕಾ ಮೇವು ಹಗರಣ ಪ್ರಕರಣದಲ್ಲಿ ಲಾಲು ಹಾಗೂ ಇನ್ನಿತರೆ 19 ಮಂದಿ ಮೇಲಿದ್ದ ಆರೋಪ ಸಾಬೀತಾಗಿದ್ದು, ಜಾರ್ಖಂಡ್‍ನ ರಾಂಚಿಯ ವಿಶೇಷ ಸಿಬಿಐ ಕೋರ್ಟ್ ಶಿಕ್ಷೆ ಪ್ರಕಟಿಸಿದೆ. ಲಾಲು ಮುಖ್ಯಮಂತ್ರಿಯಾಗಿದ್ದಾಗ ಬಿಹಾರದಲ್ಲಿದ್ದ, ಸದ್ಯ ಜಾರ್ಖಂಡ್‍ನಲ್ಲಿರುವ ದುಮ್ಕಾ ಖಜಾನೆಯಿಂದ ಅಕ್ರಮವಾಗಿ 3.13 ಕೋಟಿ ರೂ. ಹಣ ಪಡೆದುಕೊಂಡ ಆರೋಪ ಇವರ ಮೇಲಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಮಾಜಿ ಮುಖ್ಯಮಂತ್ರಿಯಾಗಿದ್ದ ಜಗನ್ನಾತ್ ಮಿಶ್ರಾ ಅವರನ್ನ ನಿರಪರಾಧಿ ಎಂದು ಕೋರ್ಟ್ ಹೇಳಿದ್ದರಿಂದ ಲಾಲು ಪರ ವಕೀಲರು ಲಾಲು ಪ್ರಸಾದ್ ಯಾದವ್‍ಗೂ ರಿಲೀಫ್ ಸಿಗಬಹುದು ಎಂಬ ಭರವಸೆ ಹೊಂದಿದ್ದರು.

ಇತರೆ ಪ್ರಕರಣಗಳಲ್ಲಿ ಲಾಲುಗೆ 5 ಹಾಗೂ ಮೂರುವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಶಿಕ್ಷೆಗಳು ಪ್ರತ್ಯೇಕವಾಗಿರಲಿದ್ದು, ಒಂದುಗೂಡಿಸುವುದಿಲ್ಲ ಎಂದು ವರದಿಯಾಗಿದೆ.

ಮೊದಲನೇ ಪ್ರಕರಣದಲ್ಲಿ ಲಾಲು ಗೆ 5ವರ್ಷ ಜೈಲು ಶಿಕ್ಷೆಯಾಗಿತ್ತು. ಎರಡನೇ ಪ್ರಕರಣದಲ್ಲಿ 3.5 ವರ್ಷ ಹಾಗೂ ಮೂರನೇ ಪ್ರಕರಣದಲ್ಲಿ ಮತ್ತೆ 5 ವರ್ಷ ಶಿಕ್ಷೆ ವಿಧಿಸಲಾಗಿತ್ತು. ಸದ್ಯ ಲಾಲು ರಾಂಚಿಯ ಬಿಸ್ರಾ ಮೂಮಡಾ ಜೈಲಿನಲ್ಲಿದ್ದಾರೆ.

ಏನಿದು ಪ್ರಕರಣ?: 20 ವರ್ಷಗಳ ಹಿಂದೆ ಬಿಹಾರದಲ್ಲಿ ಪಶುಗಳಿಗೆ ಮೇವು ಹಾಗೂ ಔಷಧಿ ಪೂರೈಸುವುದಾಗಿ ಚಾಯ್ಬಾಸ ಜಿಲ್ಲೆಯ ಸರ್ಕಾರಿ ಖಜಾನೆಯಿಂದ ಹಣವನ್ನು ಬಿಡುಗಡೆ ಮಾಡಲಾಗಿತ್ತು. ಜಾನುವಾರುಗಳಿಗೆ ಮೇವು ಹಾಗೂ ಔಷಧ ಒದಗಿಸುವ ನೆಪದಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಸರ್ಕಾರದ ಹಣವನ್ನು ಲೂಟಿ ಮಾಡಿದ್ದರು. 900 ಕೋಟಿ ರೂ. ಮೊತ್ತದ ಮೇವು ಹಗರಣ ಸಂಬಂಧ ಒಟ್ಟು 53 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 44 ಪ್ರಕರಣಗಳ ತೀರ್ಪು ಈಗಾಗಲೇ ಹೊರಬಿದ್ದಿದೆ. ಲಾಲು ಪ್ರಸಾದ್ ಯಾದವ್ ವಿರುದ್ಧ ಆರು ಪ್ರಕರಣಗಳು ದಾಖಲಾಗಿವೆ.

Comments

Leave a Reply

Your email address will not be published. Required fields are marked *