ಸಹೋದರಿಯ ಪ್ರಿಯತಮನ ಕೊಲೆಗೆ 60 ಸಾವಿರ ರೂ. ಸುಪಾರಿ ನೀಡ್ದ ಅಪ್ರಾಪ್ತ!

ಮುಂಬೈ: ತನ್ನ ಇಬ್ಬರು ಗೆಳೆಯರಿಗೆ ಹಣ ನೀಡಿ ಸಹೋದರಿಯ ಪ್ರಿಯತಮನನ್ನು ಕೊಂದ ಆರೋಪದ ಮೇಲೆ ಅಪ್ರಾಪ್ತನನ್ನು ಪೊಲೀಸರು ಬಂಧಿಸಿದ್ದಾರೆ.

17 ವರ್ಷದ ಅಪ್ರಾಪ್ತ ತನ್ನಿಬ್ಬರು ಗೆಳೆಯರಿಗೆ 60 ಸಾವಿರ ರೂ. ಹಣ ನೀಡುವುದಾಗಿ ಹೇಳಿ 24 ವರ್ಷದ ಪ್ರವೀಣ್ ಫರಾದ್ ಎಂಬಾತನನ್ನು ಕೊಲೆ ಮಾಡಿಸಿದ್ದಾನೆ. ಪ್ರವೀಣ್, ಪನ್ವೆಲ್‍ನ ಮಹಾಲುಂಗಿ ಗ್ರಾಮದ ನಿವಾಸಿ ಎಂಬುದಾಗಿ ವರದಿಯಾಗಿದೆ.

ಕೊಲೆಯಾದ ಪ್ರವೀಣ್ ಫರಾದ್ ತಾಲೋಜಾದಲ್ಲಿರುವ ರಸಗೊಬ್ಬರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದನು. ಈತ ಸುಪಾರಿ ನೀಡಿದಾತನ ಸಹೋದರಿಯನ್ನು ಪ್ರೀತಿಸುತ್ತಿದ್ದನು. ಆದ್ರೆ ಈ ವಿಚಾರ ತಿಳಿದ ಅಪ್ರಾಪ್ತ ಅವರಿಬ್ಬರನ್ನು ಬೇರ್ಪಡಿಸಲು ಹುನ್ನಾರ ಹೂಡಿದ್ದನು.

ಕೊಲೆಗಾರರದ 24 ವರ್ಷದ ವಿಲಾಸ್ ಮತ್ತು 21 ವರ್ಷದ ಆಕಾಶ್ ಶೆಲ್ಕೆ ಎಂಬಿಬ್ಬರನ್ನು ಈಗಾಗಲೇ ಬಂಧಿಸಿದ್ದೇವೆ. ಇವರಿಬ್ಬರೂ ವಾವಂಜೆ ಗ್ರಾಮದ ನಿವಾಸಿಗಳಾಗಿದ್ದಾರೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಅಭಯ್ ಮಹಾಜನ್ ಹೇಳಿದ್ದಾರೆ.

ಆರೋಪಿಗಳು ಪ್ರವೀಣ್ ನನ್ನು ಫೆಬ್ರವರಿ 23ರಂದು ಕೊಲೆ ಮಾಡಿದ್ದು, ಮಾರ್ಚ್ 6ರಂದು ಬಂಧಿಸಲಾಗಿದೆ. ಬಳಿಕ ವಿಚಾರಣೆಗೆ ಒಳಪಡಿಸಿದಾಗ ಅಪ್ರಾಪ್ತನೊಬ್ಬ ಆತನ ಸಹೋದರಿಯ ಪ್ರಿಯತಮನನ್ನು ಕೊಲೆ ಮಾಡಿದ್ರೆ 60 ಸಾವಿರ ರೂ. ನೀಡುವುದಾಗಿ ಹೇಳಿದ್ದನು. ಅಲ್ಲದೇ ಮುಂಗಡವಾಗಿ 2 ಸಾವಿರ ರೂ. ಹಣವನ್ನೂ ನೀಡಿದ್ದು, ಕೃತ್ಯ ಎಸಗಿದ ಬಳಿಕ ಉಳಿದ ಹಣ ನೀಡುವುದಾಗಿ ಹೇಳಿದ್ದನು. ಹೀಗಾಗಿ ತಾವು ಈ ಕೃತ್ಯ ಎಸಗಿರುವುದಾಗಿ ಬಾಯ್ಬಿಟ್ಟಿದ್ದಾರೆ ಅಂತ ಅವರು ಹೇಳಿದ್ರು.

ಹಣದ ಆಸೆಗಾಗಿ ಆರೋಪಿಗಳು ಪ್ರವೀಣ್ ನನ್ನು ಹಾಜಿ ಮಲಾಂಗ್ ಗಢ್ ನ ತಪ್ಪಲಿನ ಪ್ರದೇಶಕ್ಕೆ ಕರೆದು ಮದ್ಯಪಾನ ಮಾಡಿಸಿ, ಪಾರ್ಟಿ ಮಾಡಿದ್ದಾರೆ. ಬಳಿಕ ಪ್ರವೀಣ್ ಮುಖವನ್ನು ಜಜ್ಜಿ, ಆತನ ಮೃತದೇಹವನ್ನು ಪಕ್ಕದ ಚರಂಡಿಗೆ ಬಿಸಾಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ ಅಂತ ಆರೋಪಿಗಳು ವಿವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *