ಮುಂದೆ ನಿಂತು ಪೂಜೆ ಮಾಡುವ ವಿಷಯಕ್ಕೆ ಜಗಳ- ಸಚಿವ ಕೃಷ್ಣಪ್ಪ ಮುಂದೆಯೇ ಎಂಎಲ್‍ಎ, ಜಿ.ಪಂ ಸದಸ್ಯರ ಫೈಟ್

ಮಂಡ್ಯ: ಚುನಾವಣೆ ಹತ್ತಿರ ಬರುತ್ತಿದ್ದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆ ಜೋರಾಗಿಯೇ ನಡೆಯುತ್ತಿದೆ. ಈ ವೇಳೆ ಮುಂದೆ ನಿಂತು ಪೂಜೆ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕರು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರು ಸಚಿವರ ಮುಂದಯೇ ಪರಸ್ಪರ ಕಿತ್ತಾಡುತ್ತ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ ನಡೆದಿದೆ.

ಸೋಮವಾರ ಸಂಜೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಕಿಕ್ಕೇರಿಯ ಅಮಾನಿಕೆರೆಯ ಕಾಮಗಾರಿಗೆ ಸಂಬಂಧಿಸಿದಂತೆ ಗುದ್ದಲಿ ಪೂಜೆ ನೆರವೇರಿಸಲು ಬಂದಿದ್ರು. ಈ ವೇಳೆ ಕೆಆರ್ ಪೇಟೆ ಕ್ಷೇತ್ರದ ಶಾಸಕ, ಜೆಡಿಎಸ್‍ನ ನಾರಾಯಣಗೌಡ ಉಸ್ತುವಾರಿ ಸಚಿವರ ಪಕ್ಕದಲ್ಲಿ ನಿಂತು ಪೂಜೆ ಸಲ್ಲಿಸಲು ಮುಂದಾದ್ರು. ಇದೇ ವೇಳೆ ಕಿಕ್ಕೇರಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ, ಕಾಂಗ್ರೆಸ್ ಮುಖಂಡ ದೇವರಾಜು ಕೂಡ ಉಸ್ತುವಾರಿ ಸಚಿವರ ಪಕ್ಕದಲ್ಲಿ ನಿಲ್ಲಲು ಬಂದಿದ್ದಾರೆ. ಜೊತೆಗೆ ಸ್ಥಳದಲ್ಲಿ ನೂರಾರು ಜನ ಸೇರಿದ್ದರಿಂದ ಸ್ವಲ್ಪ ನೂಗುನುಗ್ಗಲಾಗಿದೆ.

ಇದ್ರಿಂದ ಕೆರಳಿದ ಶಾಸಕ ನಾರಾಯಣಗೌಡ, ಪಕ್ಕದಲ್ಲಿದ್ದ ಜಿಲ್ಲಾಪಂಚಾಯ್ತಿ ಸದಸ್ಯ ದೇವರಾಜುಗೆ ನಾನು ಮೂರು ಗಂಟೆಯಿಂದ ಕಾಯುತ್ತಿದ್ದೇನೆ. ನಾನೊಬ್ಬ ಶಾಸಕ, ನನ್ನನ್ನೇ ತಳ್ಳುತ್ತೀರಾ. ಬೇಕಾದ್ರೆ ನೀವೇ ಪೂಜೆ ಮಾಡಿಕೊಳ್ಳಿ, ನಾನು ಹೋಗುತ್ತೇನೆ ಎಂದು ಹರಿಹಾಯ್ದಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಜಿಲ್ಲಾ ಪಂಚಾಯ್ತಿ ಸದಸ್ಯ ದೇವರಾಜು ಕೂಡ ನಾನೇನು ನಿಮ್ಮನ್ನು ತಳ್ಳಿಲ್ಲ ಎಂದು ಜೋರು ಧ್ವನಿಯಲ್ಲಿ ಉತ್ತರ ಕೊಟ್ಟಿದ್ದಾರೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ.

ಈ ವೇಳೆ ಇಬ್ಬರ ಮಧ್ಯೆ ನಿಂತುಕೊಂಡ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಇಬ್ಬರನ್ನು ಸಮಾಧಾನಪಡಿಸಲು ಹರಸಾಹಸಪಟ್ಟರು. ಸ್ಥಳೀಯ ಮುಖಂಡರು ಕೂಡ ಶಾಸಕ ನಾರಾಯಣಗೌಡ ಮತ್ತು ದೇವರಾಜುರನ್ನು ಹಿಡಿದುಕೊಂಡು ಜಗಳವಾಡದಂತೆ ಸಮಾಧಾನ ಮಾಡಿದರು.

Comments

Leave a Reply

Your email address will not be published. Required fields are marked *