9 ಮಂದಿ ಏಕಾಏಕಿ ಕ್ಯಾಂಟೀನ್ ಗೆ ನುಗ್ಗಿ ಯುವಕನನ್ನ ಕೊಚ್ಚಿ ಕೊಂದ್ರು

ಶಿವಮೊಗ್ಗ: ಕ್ಯಾಂಟೀನ್ ನಡೆಸುತ್ತಿದ್ದ ಯುವಕನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ಆಟೋ ಕಾಂಪ್ಲೆಕ್ಸ್ ನಲ್ಲಿ ನಡೆದಿದೆ.

ಇಂದಿರಾನಗರದ ಮಧು ಕೊಲೆಯಾದ ಯುವಕನಾಗಿದ್ದು, ಈತ ಈ ಮುಂಚೆ ಆಟೋ ಚಾಲಕನಾಗಿದ್ದನು. ರಾತ್ರಿ ಮೂರು ಬೈಕ್ ಗಳಲ್ಲಿ ಬಂದ ಒಂಭತ್ತು ಯುವಕರು ಏಕಾಏಕಿ ಮಧು ಮೇಲೆ ದಾಳಿ ನಡೆಸಿದ್ದಾರೆ. ಮಚ್ಚು, ಲಾಂಗು, ಚೂರಿ ಸಮೇತ ಬಂದಿದ್ದ ತಂಡ ನೇರವಾಗಿ ಕ್ಯಾಂಟೀನ್ ಗೆ ನುಗ್ಗಿದ್ದು, ಇದರಿಂದ ಮಧು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಪರಿಣಾಮ ತಂಡದ ದಾಳಿಗೆ ಸಿಲುಕಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಕ್ಯಾಂಟೀನ್ ನಲ್ಲಿ ಮಧು ಓಸಿ ದಂಧೆ ನಡೆಸುತ್ತಿದ್ದನು. ಓಸಿ ದಂಧೆಯ ಮೇಲೆ ನಿಯಂತ್ರಣ ಸಾಧಿಸಲು ಪ್ರವೀಣ್ ಮತ್ತು ಮಧು ಗ್ಯಾಂಗ್ ನಡುವೆ ಪೈಪೋಟಿ ಇತ್ತು. ಈ ವಿಚಾರವಾಗಿ ಆಗಾಗ ಗಲಾಟೆ ಕೂಡ ನಡೆದಿತ್ತು. ಇದೇ ವಿಷಯಕ್ಕೆ ಕೊಲೆ ನಡೆದಿದೆ ಎನ್ನಲಾಗಿದೆ.

ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆಯಾದ ಮಧು ಹಾಗೂ ಕೊಲೆ ಮಾಡಿದ ಆರೋಪಿ ಪ್ರವೀಣ್ ವಾಸವಿದ್ದಾರೆ. ಹಳೆಯ ಗಲಾಟೆಗೆ ಸಂಬಂಧಿಸಿದಂತೆ ಕಳೆದ ವಾರವಷ್ಟೇ ಇಲ್ಲಿನ ಯುವಕರು ಹೊಡೆದಾಡಿಕೊಂಡಿದ್ದರು. ಆಗ ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದರೆ ಇಂದಿನ ಕೊಲೆ ತಪ್ಪಿಸಬಹುದಿತ್ತು ಅಂತ ಸ್ಥಳೀಯರು ಹೇಳುತ್ತಿದ್ದಾರೆ.

ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಹಾಗೂ ವಿನೋಬ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *