‘ಮನೆ ಬಿಟ್ಟು ಬಾ, ಓಡಿಹೋಗಿ ಮದುವೆಯಾಗೋಣ’- ಯುವಕನ ಒತ್ತಡ ತಾಳಲಾರದೇ ಬೆಂಕಿ ಹಚ್ಚಿಕೊಂಡ ಅಪ್ರಾಪ್ತೆ

ಮೈಸೂರು: ಪ್ರೀತಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಯುವಕನ ಕಿರುಕುಳಕ್ಕೆ ಬೇಸತ್ತು ಅಪ್ರಾಪ್ತೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಅಮಾನವೀಯ ಘಟನೆ ಜಿಲ್ಲೆಯ ಉದಯಗಿರಿಯ ಮುನ್ನೇಶ್ವರ ನಗರದಲ್ಲಿ ನಡೆದಿದೆ.

ರಕ್ಷಿತಾ (15) ಮೃತಪಟ್ಟ ಅಪ್ರಾಪ್ತೆ. ಆರೋಪಿ ಮುನ್ನೇಶ್ವರ ನಗರದ ನಿವಾಸಿ ಗಿರೀಶ್ ನಾಪತ್ತೆಯಾಗಿದ್ದಾನೆ. ಆರೋಪಿ ಕಳೆದ ಹಲವು ದಿನಗಳಿಂದ ರಕ್ಷಿತಾಳನ್ನು ನನ್ನನ್ನು ಪ್ರೀತಿಸು ಎಂದು ಒತ್ತಾಯಿಸುತ್ತಿದ್ದನು. ಅಷ್ಟೇ ಅಲ್ಲದೇ ಮನೆ ಬಿಟ್ಟು ಬಾ, ಓಡಿಹೋಗಿ ಮದುವೆಯಾಗೋಣ ಎಂದು ಒತ್ತಡ ಹೇರಿದ್ದನು. ಒಂದು ವೇಳೆ ಮದುವೆಯಾಗಲು ಒಪ್ಪದಿದ್ದರೆ ನಿನ್ನ ಮನೆಯವರನ್ನ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು.

ಆರೋಪಿ ಗಿರೀಶ್ ನ ಬೆದರಿಕೆಗೆ ಹೆದರಿದ ರಕ್ಷಿತಾ ಫೆಬ್ರವರಿ 21 ರಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ತಕ್ಷಣ ಆಕೆಯನ್ನು ಪೋಷಕರು ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದರು. ಅಂದಿನಿಂದಲೂ ರಕ್ಷಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ರಾತ್ರಿ ರಕ್ಷಿತಾ ಸಾವನ್ನಪ್ಪಿದ್ದಾಳೆ.

ಈ ಘಟನೆ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಆರೋಪಿ ಗಿರೀಶ್ ವಿರುದ್ಧ ಪೋಕ್ಸೋ ಕಾಯಿದೆ ಅಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ನಾಪತ್ತೆಯಾಗಿರುವ ಗಿರೀಶ್ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಇದನ್ನು ಓದಿ: ಆರು ಬಾರಿ ಚೂರಿಯಿಂದ ಇರಿದು ನಡುಬೀದಿಯಲ್ಲೇ ವಿದ್ಯಾರ್ಥಿನಿಯನ್ನು ಕೊಂದೇಬಿಟ್ಟ!

Comments

Leave a Reply

Your email address will not be published. Required fields are marked *