ಅಪ್ಪಾಜಿ ಕ್ಯಾಂಟೀನ್ ರಾಗಿ ಮುದ್ದೆಗೆ ಬಹುಪರಾಕ್-ಇಂದಿರಾ ಕ್ಯಾಂಟೀನ್‍ನಲ್ಲೂ ಶುರುವಾಗಲಿದೆ ಹೊಸ ಮೆನು !

ಬೆಂಗಳೂರು: ಜೆಡಿಎಸ್‍ನ ಅಪ್ಪಾಜಿ ಕ್ಯಾಂಟೀನ್ ರಾಗಿ ಮುದ್ದೆ, ಇಂದಿರಾ ಕ್ಯಾಂಟೀನ್ ರೈಸ್ ಬಾತ್‍ಗೆ ಸೈಡ್ ಹೊಡೆದು ಬಿಡ್ತಾ..? ಅಪ್ಪಾಜಿ ಕ್ಯಾಂಟೀನ್‍ನ ರಾಗಿ ಮುದ್ದೆಗೆ ಬೆಂಗಳೂರು ಜನ ಫುಲ್ ಮಾರ್ಕ್ಸ ಕೊಟ್ಟಿದ್ದಾರೆ. ಈ ವಿಚಾರ ಬಿಬಿಎಂಪಿಗೂ ಗೊತ್ತಾಗಿದೆ ಅನಿಸುತ್ತೆ. ಹಾಗಾಗಿ ಇಂದಿರಾ ಕ್ಯಾಂಟೀನ್‍ಗೂ ಸದ್ಯದಲ್ಲೇ ರಾಗಿ ಮುದ್ದೆ ಎಂಟ್ರಿ ಕೊಡಲಿದೆ.

198 ವಾರ್ಡ್ ಗಳಲ್ಲಿ ಸರ್ಕಾರ ಶುರು ಮಾಡಿರೋ ಇಂದಿರಾ ಕ್ಯಾಂಟೀನ್‍ಗಳಿಗಿಂತ ಬೆಂಗಳೂರಿನ ನಾಗರೀಕರ ಮನ ಗೆದ್ದಿರೋದು ಜೆಡಿಎಸ್‍ನ ಅಪ್ಪಾಜಿ ಕ್ಯಾಂಟೀನ್‍ನ ಮುದ್ದೆ ಬಸ್ಸಾರು. ಇದೀಗ ಬಿಬಿಎಂಪಿ ಸಹ ಅಪ್ಪಾಜಿ ಕ್ಯಾಂಟೀನ್ ಸ್ಟ್ರಾಟಜಿಗೆ ಮೊರೆ ಹೋಗಿದ್ದು, ಮಧ್ಯಾಹ್ನದ ಊಟಕ್ಕೆ ಮುದ್ದೆ ಬಸ್ಸಾರು, ಸೊಪ್ಪಿನ ಸಾರು, ಮೊಳಕೆ ಕಾಳಿನ ಸಾಂಬಾರ್ ನೀಡೋಕೆ ಚಿಂತನೆ ನಡೆಸಿದೆ. ಇದೇ ಮಾರ್ಚ್ ಒಂದರಿಂದ ಇಂದಿರಾ ಕ್ಯಾಂಟೀನ್‍ನಲ್ಲಿ ಬಿಸಿ ಬಿಸಿ ರಾಗಿ ಮುದ್ದೆಯನ್ನ ಸಾರ್ವಜನಿಕರು ಸವಿಯಬಹುದಾಗಿದೆ.

ಬೆಳಗಿನ ಉಪಹಾರದ ಮೆನುನಲ್ಲೂ ಬದಲಾವಣೆ ಆಗ್ತಿದ್ದು, ಬಿಬಿಎಂಪಿ ಇಡ್ಲಿ, ಉಪ್ಪಿಟ್ಟಿನ ಜೊತೆ ಕೇಸರಿ ಬಾತ್, ಶಾವಿಗೆ ಬಾತ್ ನೀಡೋ ತಯಾರಿಯಲ್ಲಿದೆ. ಈಗಾಗಲೇ ಇಂದಿರಾ ಕ್ಯಾಂಟೀನ್ ಮುಂಭಾಗ ಜನರ ಸಂಖ್ಯೆ ಕಡಿಮೆಯಾಗಿದೆ. ಕ್ಯಾಂಟೀನ್‍ಗಾಗಿ ದೊಡ್ಡ ದೊಡ್ಡ ಕಟ್ಟಡಗಳಿದ್ರೂ ಆಹಾರದ ವಿಚಾರವಾಗಿ ಶುಚಿ ರುಚಿ ಎರಡು ಮುಖ್ಯ ಅನ್ನೋದು ಬಿಬಿಎಂಪಿಗೆ ಅರ್ಥವಾದಂತಿದೆ. ಈ ಹೊಸ ಮೆನ್ಯೂ ಇಂದಿರಾ ಕ್ಯಾಂಟೀನ್ ಕಡೆ ಸಾರ್ವಜನಿಕರನ್ನು ಸೆಳೆಯೋದ್ರಲ್ಲಿ ಯಶಸ್ವಿಯಾಗುತ್ತಾ ಕಾದು ನೋಡಬೇಕಿದೆ.

Comments

Leave a Reply

Your email address will not be published. Required fields are marked *