ಪಕೋಡಾ ವ್ಯಾಪಾರಿಯ ನಿರ್ಲಕ್ಷ್ಯಕ್ಕೆ ಬಾಲಕಿಯ ಕಾಲು ಸುಟ್ಟೇ ಹೋಯ್ತು!

ಮಂಗಳೂರು: ರಸ್ತೆ ಬದಿ ಪಕೋಡಾ ವ್ಯಾಪಾರಿಯೊಬ್ಬಳು ಕಾದ ಎಣ್ಣೆಯನ್ನು ಸುರಿದ ಪರಿಣಾಮ ಬಾಲಕಿಯ ಬಲಗಾಲು ಸುಟ್ಟು ಹೋಗಿರುವ ಅಮಾನವೀಯ ಘಟನೆ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ನಲ್ಲಿ ನಡೆದಿದೆ.

14 ವರ್ಷದ ಅಮಂಡಾ ಗಾಯಗೊಳಗಾದ ಬಾಲಕಿ. ಭಾನುವಾರ ಮಧ್ಯಾಹ್ನ ಅಮಂಡಾ ತನ್ನ ತಂದೆ ವಿಕ್ಟರ್ ಜೊತೆ ಮಾರ್ಕೆಟ್ ನಲ್ಲಿ ಹಣ್ಣು ಹಂಪಲು ತೆಗೆದುಕೊಂಡು ಹಿಂದಿರುಗುತ್ತಿದ್ದಳು. ಈ ವೇಳೆ ರಸ್ತೆ ಬದಿ ಪಕೋಡಾ ಮಾಡುತ್ತಿದ್ದ ಮಹಿಳೆ ಏಕಾಏಕಿ ಕಾದ ಬಿಸಿ ಎಣ್ಣೆಯನ್ನು ನಿರ್ಲಕ್ಷ್ಯ ದಿಂದ ಸುರಿದಿದ್ದಾಳೆ.

ಅಮಂಡಾ ಬಲಗಾಲಿಗೆ ಕಾದ ಎಣ್ಣೆ ಬಿದ್ದ ಪರಿಣಾಮ ಕಾಲು ಸಂಪೂರ್ಣ ಸುಟ್ಟು ಹೋಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಪಕೋಡಾ ವ್ಯಾಪಾರಿಯ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದ್ದರಿಂದ ಆಕೆಯ ವಿರುದ್ಧ ಬಂದರು ಪೊಲೀಸ್ ಠಾಣೆಯಲ್ಲಿ ತಂದೆ ವಿಕ್ಟರ್ ದೂರು ನೀಡಿದ್ದಾರೆ. ಬಾಲಕಿ ಅಮಂಡಾ ಮಂಗಳೂರಿನ ಖಾಸಗಿ ಶಾಲೆಯ ವಿದ್ಯಾರ್ಥಿನಿಯಾಗಿದ್ದು ಫೆ. 19ರಿಂದ ವಾರ್ಷಿಕ ಪರೀಕ್ಷೆ ಆರಂಭವಾಗಲಿದೆ.

ಈ ಬಗ್ಗೆ ಬಾಲಕಿ ತಂದೆ ವಿಕ್ಟರ್ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಗೆ ದೂರು ನೀಡಿದ್ದು, ಮಾರ್ಕೆಟ್ ನಲ್ಲಿ ರಸ್ತೆ ಬದಿ ಪಕೋಡಾ ಕಾಯಿಸುವವರನ್ನು ನಿಯಂತ್ರಿಸಿ ಮಗಳಿಗಾದ ಅನಾಹುತ ಬೇರೆಯವರಿಗೆ ಆಗದಂತೆ ನೋಡಿಕೊಳ್ಳಲು ಮನವಿ ಮಾಡಿದ್ದಾರೆ.

 

Comments

Leave a Reply

Your email address will not be published. Required fields are marked *