ಅಪ್ರಾಪ್ತೆಯನ್ನ ಪ್ರೀತಿಸಿ, ಕಿಡ್ನಾಪ್ ಮಾಡಿ ಒತ್ತಾಯದಿಂದ ಮದ್ವೆಯಾದ- 1 ವರ್ಷದ ನಂತರ ಪತ್ನಿಯ ಶವದ ಜೊತೆ ಬಂದ!

ಶಿವಮೊಗ್ಗ: ಅಪ್ರಾಪ್ತ ಪತ್ನಿಯ ಶವದ ಜೊತೆ ಬಂದ ಪತಿಗೆ ಸಂಬಂಧಿಗಳು ಹಾಗೂ ಸಾರ್ವಜನಿಕರು ಹಿಡಿದು ಥಳಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಅಪ್ರಾಪ್ತೆಯನ್ನ ಪ್ರೀತಿಸಿ ಒತ್ತಾಯದಿಂದ ಮದುವೆಯಾಗಿದ್ದ ಆನಂದ್, ಒಂದು ವರ್ಷ ಸಂಸಾರ ಮಾಡಿ ಈಗ ಪತ್ನಿಯ ಶವದ ಜೊತೆ ಗ್ರಾಮಕ್ಕೆ ವಾಪಸ್ ಆಗಿದ್ದಾನೆ. ಇದರಿಂದ ಪೋಷಕರು ಮತ್ತು ಇಡೀ ಗ್ರಾಮದವರು ಪತಿಗೆ ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ.

ಏನಿದು ಘಟನೆ?: ಭದ್ರಾವತಿ ತಮ್ಮಣ್ಣ ಕಾಲೋನಿ ನಿವಾಸಿಯಾಗಿರುವ 28 ವರ್ಷದ ಯುವಕ ಆನಂದ್, ಒಂದು ವರ್ಷದ ಹಿಂದೆ ಇದೇ ಕಾಲೋನಿಯ ತನ್ನ ಸಂಬಂಧಿಯಾದ ಅಪ್ರಾಪ್ತೆಯನ್ನು ಪ್ರೀತಿಸಿದ್ದ. ನಂತರ ಆನಂದ್ ಬಾಲಕಿಯನ್ನು ಕಿಡ್ನಾಪ್ ಮಾಡಿದ್ದ. ಈ ಬಗ್ಗೆ ಪೋಷಕರು ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯಲ್ಲಿ ಬಾಲಕಿ ನಾಪತ್ತೆಯಾಗಿರುವ ಕುರಿತು ದೂರು ನೀಡಿದ್ದರು. ಪೊಲೀಸರಿಗೆ ದೂರು ನೀಡುತ್ತಿದ್ದಂತೆ ಆನಂದ್ ಕೂಡ ನಾಪತ್ತೆಯಾಗಿದ್ದ.

ಕುಟುಂಬದವರಿಗೆ ಆನಂದನೇ ಬಾಲಕಿಯನ್ನು ಕಿಡ್ನಾಪ್ ಮಾಡಿದ್ದಾನೆ ಎಂಬುದು ಗೊತ್ತಾಗಿತ್ತು. ಕೂಡಲೇ ಇಬ್ಬರನ್ನು ಪತ್ತೆ ಹಚ್ಚಲು ಪೊಲೀಸರು ಹಾಗೂ ಬಾಲಕಿ ಕುಟುಂಬದವರು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಬರೋಬ್ಬರಿ ಒಂದು ವರ್ಷ ಕಳೆದರೂ ಇಬ್ಬರೂ ಎಲ್ಲಿದ್ದಾರೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಆದರೆ ಆನಂದ್ ಆಕೆಯನ್ನು ಒತ್ತಾಯದಿಂದ ಮದುವೆಯಾಗಿ ಹೊಸಪೇಟೆಯಲ್ಲಿ 1 ವರ್ಷ ಸಂಸಾರ ನಡೆಸಿದ್ದಾನೆ. ಆದರೆ ಗುರುವಾರ ರಾತ್ರಿ ಬಾಲಕಿ ಹೊಸಪೇಟೆಯಲ್ಲಿ ಮೃತಪಟ್ಟಿದ್ದಾಳೆ ಎಂದು ಪೋಷಕರಿಗೆ ಕರೆ ಮಾಡಿ ತಿಳಿಸಿದ್ದಾನೆ.

ಇಂದು ಆನಂದ್ ಪತ್ನಿಯ ಮೃತದೇಹದೊಂದಿಗೆ ಭದ್ರಾವತಿಗೆ ಆಗಮಿಸಿದ್ದು, ಆಕೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾಳೆ ಎಂದಿದ್ದಾನೆ. ಇದರಿಂದ ಆಕ್ರೋಶಗೊಂಡ ಬಾಲಕಿ ಸಂಬಂಧಿಕರು ಆನಂದನ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ತಪ್ಪಿಸಲು ಬಂದ ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಹೊಸಮನೆ ಠಾಣೆ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆನಂದನೇ ಬಾಲಕಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾನೆ. ಆತನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಬಾಲಕಿಯ ಸಂಬಂಧಿಕರು ಆಗ್ರಹಿಸುತ್ತಿದ್ದಾರೆ.

 

Comments

Leave a Reply

Your email address will not be published. Required fields are marked *