ಸೋಲದೇವನಹಳ್ಳಿ ಮಗು ಕೊಲೆ ಪ್ರಕರಣಕ್ಕೆ ಟ್ವಿಸ್ಟ್- 15 ವರ್ಷದ ಬಾಲಕನ ಬಂಧನ

ಬೆಂಗಳೂರು: ಗುರುವಾರದಂದು ಸೋಲದೇವನಹಳ್ಳಿ ನಡೆದಿದ್ದ 2 ವರ್ಷದ ಮಗು ಕೊಲೆ ಪ್ರಕರಣಕ್ಕೆ ತಿರುವು ಸಿಕ್ಕಿದೆ.

ಸೋಲದೇವನಹಳ್ಳಿಯ ನಿವಾಸಿ ಬಸವರಾಜು ಮತ್ತು ವೆಂಕಮ್ಮ ದಂಪತಿಯ ಮಗನಾದ ಎರಡು ವರ್ಷದ ವೆಂಕಟೇಶ್ ನನ್ನು ಕಾಲಿನಿಂದ ಕುತ್ತಿಗೆಯನ್ನು ತುಳಿದು ಕೊಲೆ ಮಾಡಲಾಗಿತ್ತು. ಎರಡು ದಿನಗಳ ಹಿಂದೆ ಪಕ್ಕದ ಮನೆಯ ಈರಣ್ಣ ಹಾಗೂ ಬಸವರಾಜು ಕುಟುಂಬಕ್ಕೆ ನಾಯಿಗೆ ಹಾಲು ಹಾಕುವ ಬಟ್ಟಲಿನ ವಿಚಾರಕ್ಕೆ ಜಗಳವಾಗಿತ್ತು. ಜಗಳವಾದ ಬಳಿಕ ಈರಣ್ಣನೇ ಮಗುವನ್ನು ಕೊಲೆ ಮಾಡಿದ್ದಾನೆ ಎಂದು ವೆಂಕಟೇಶ್ ಪೋಷಕರು ಆರೋಪಿಸಿದ್ದರು.

ಆದ್ರೆ ಇದೀಗ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಈರಣ್ಣನ ಮಗನಾದ 15 ವರ್ಷದ ಬಾಲಕನಿಂದ ವೆಂಕಟೇಶ್ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ. ಆರೋಪಿ ಬಾಲಕ ನಾಲ್ಕೈದು ವರ್ಷಗಳಿಂದ ಮನೆಯಲ್ಲಿ ಪಾರಿವಾಳ ಸಾಕುತ್ತಿದ್ದ. ಕೊಲೆಯಾದ ಮಗು ವೆಂಕಟೇಶ್ ಕೀಟಲೆ ಮಾಡಿ ಆ ಪಾರಿವಾಳವನ್ನೆಲ್ಲಾ ಪಂಜರದಿಂದ ತೆಗೆದು ಹಾರಲು ಬಿಡುತ್ತಿದ್ದ. ಇದ್ರಿಂದ ಆರೋಪಿಗೆ ವೆಂಕಟೇಶನ ಮೇಲೆ ಕೋಪ ಇತ್ತು. ಮೊನ್ನೆಯೂ ಕೂಡ ಮೃತ ವೆಂಕಟೇಶ್ ಪಾರಿವಾಳ ಹಾರಲು ಬಿಟ್ಟಿದ್ದ. ಆ ಪಾರಿವಾಳ ನೀಲಗಿರಿ ತೋಪಿಗೆ ಹೋಗಿತ್ತು. ಅದನ್ನು ಹಿಡಿಯಲು ಹೋದ ಆರೋಪಿ ಜೊತೆ ವೆಂಕಟೇಶ್ ಕೀಟಲೆ ಮಾಡಿದ್ದರಿಂದ ಪಾರಿವಾಳವನ್ನು ಸಾಯಿಸ್ತೀಯಾ ಅಂತ ಕಾಲಿನಿಂದ ತುಳಿದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಆರೋಪಿ ಬಾಲಕನನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬುಧವಾರ ಮಧ್ಯಾಹ್ನ ಸುಮಾರು 12 ಗಂಟೆಗೆ ಈರಣ್ಣ ಮತ್ತು ಬಸವರಾಜು ಕುಟುಂಬಗಳ ನಡುವೆ ಜಗಳ ನಡೆದಿತ್ತು. ನಂತರ ಮಧ್ಯಾಹ್ನ 3 ಗಂಟೆಗೆ ವೆಂಕಟೇಶ್ ನಾಪತ್ತೆಯಾಗಿದ್ದ. ಸಂಜೆ 5 ಗಂಟೆ ವೇಳೆ ಮನೆಯಿಂದ ಸುಮಾರು 3 ಕಿಮೀ ದೂರದಲ್ಲಿರುವ ನೀಲಗಿರಿ ತೋಪಿನಲ್ಲಿ ಕಂದಮ್ಮನ ಶವ ಪತ್ತೆಯಾಗಿತ್ತು.

ಮಧ್ಯಾಹ್ನ ಈರಣ್ಣನೇ ಮಗುವನ್ನು ಕರೆದುಕೊಂಡು ಹೋಗಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು. ಘಟನೆ ಬಳಿಕ ಈರಣ್ಣ ಮತ್ತು ಕುಟುಂಬಸ್ಥರು ನಾಪತ್ತೆಯಾಗಿದ್ದರು. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Comments

Leave a Reply

Your email address will not be published. Required fields are marked *