ನಾಳೆ ಬಳ್ಳಾರಿಗೆ ರಾಹುಲ್ ಗಾಂಧಿ ಎಂಟ್ರಿ- ಸಂಕಷ್ಟದಲ್ಲಿ ಕೈ ಹಿಡಿದ ಸ್ಥಳದಲ್ಲಿ ಚುನಾವಣಾ ಪ್ರಚಾರಕ್ಕೆ ಕಹಳೆ

ಬಳ್ಳಾರಿ: ಶನಿವಾರ ರಾಹುಲ್ ಗಾಂಧಿ ಬಳ್ಳಾರಿಗೆ ಎಂಟ್ರಿ ಕೊಡಲಿದ್ದು, ರಾಜ್ಯ ಚುನಾವಣಾ ಪ್ರಚಾರಕ್ಕೆ ರಣಕಹಳೆ ಮೊಳಗಿಸಲಿದ್ದಾರೆ.

ನಾಳೆ ಬೆಳಗ್ಗೆ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ರಾಹುಲ್ ಗಾಂಧಿ, ಹೊಸಪೇಟೆಯಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಈ ಮೂಲಕ ರಾಜ್ಯ ವಿಧಾನಸಭೆ ಚುನಾವಣೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ. ಬಳಿಕ ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಭಾನುವಾರ ಸಂಜೆ ರಾಯಚೂರಿಗೆ ತೆರಳಲಿದ್ದಾರೆ.

ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ಷೇತ್ರ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಸಂಚರಿಸಲಿದ್ದಾರೆ. ಒಟ್ಟು 4 ದಿನದಲ್ಲಿ 6 ಜಿಲ್ಲೆಗಳಲ್ಲಿ ರಾಹುಲ್ ಪ್ರವಾಸ ಮಾಡಲಿದ್ದಾರೆ.

ಬಳ್ಳಾರಿಗೂ ರಾಹುಲ್‍ಗೂ ಇದೆ ಭಾವನಾತ್ಮಕ ಸಂಬಂಧ: 1999ರಲ್ಲಿ ಭಾರಿ ಸಂಕಷ್ಟದಲ್ಲಿ ಸಿಲುಕಿದ್ದ ಕಾಂಗ್ರೆಸ್‍ಗೆ ಬಳ್ಳಾರಿ ನೆಲೆ ಕೊಟ್ಟಿತ್ತು. 1999ರಲ್ಲಿ ಬಳ್ಳಾರಿ ಮತ್ತು ಅಮೇಥಿಯಿಂದ ಸೋನಿಯಾ ಗಾಂಧಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ಭದ್ರಕೋಟೆ ಬಳ್ಳಾರಿಯಿಂದ ಸೋನಿಯಾ ಭರ್ಜರಿ ಗೆಲುವು ದಾಖಲಿಸಿದ್ದರು. ತಮ್ಮ ಮೊದಲ ಚುನಾವಣೆಯನ್ನು ಸೋನಿಯಾ ಬಳ್ಳಾರಿಯಿಂದ ಸ್ಪರ್ಧಿಸಿ ಗೆದ್ದಿದ್ದರು. 29ರ ಹರೆಯದಲ್ಲೇ ರಾಹುಲ್ ಗಾಂಧಿ ಬಳ್ಳಾರಿಯ ಬೀದಿ ಬೀದಿಗಳಲ್ಲಿ ಸುತ್ತಿದ್ರು. ಪುತ್ರಿ ಪ್ರಿಯಾಂಕ 27ರ ಹರೆಯದಲ್ಲೇ ಅಮ್ಮನ ಪರ ಪ್ರಚಾರಕ್ಕೆ ಇಳಿದಿದ್ದರು. ಮೊದಲ ಚುನಾವಣೆಯಲ್ಲೇ ಸುಷ್ಮಾ ಸ್ವರಾಜ್ ವಿರುದ್ಧ ಸೋನಿಯಾ ಗಾಂಧಿ ಭರ್ಜರಿ ಗೆಲುವು ಸಾಧಿಸಿದ್ದರು.

ರಾಜ್ಯದಲ್ಲಿ ಸೋತು ಸೊರಗಿದ್ದ ಕಾಂಗ್ರೆಸ್ ಕೈ ಹಿಡಿದಿದ್ದೂ ಕೂಡ ಇದೇ ಬಳ್ಳಾರಿ. 2010ರಲ್ಲಿ ಬಳ್ಳಾರಿ ರೆಡ್ಡಿಗಳು ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿ ಸವಾಲು ಹಾಕಿದ್ದರು. ಸವಾಲು ಸ್ವೀಕರಿಸಿದ ಸಿದ್ದರಾಮಯ್ಯ ಬಳ್ಳಾರಿಗೆ 350 ಕಿಮೀ ಪಾದಯಾತ್ರೆ ಕೈಗೊಂಡಿದ್ದರು. 2013ರಲ್ಲಿ ಕಾಂಗ್ರೆಸ್ ಪರ ಅಲೆ ಏಳಿಸುವಲ್ಲಿ ಬಳ್ಳಾರಿ ಪಾದಯಾತ್ರೆ ಯಶಸ್ವಿಯಾಗಿತ್ತು.

 

Comments

Leave a Reply

Your email address will not be published. Required fields are marked *