ಶ್ರೀರಂಗಪಟ್ಟಣದಲ್ಲಿ ರಂಗೇರುತ್ತಿದೆ ಚುನಾವಣೆ ಕಾವು- ಮತದಾರರ ಸೆಳೆಯಲು ಕೈ ನಾಯಕರಿಂದ ಭರ್ಜರಿ ಬಾಡೂಟ

ಮಂಡ್ಯ: ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತದಾರರನ್ನು ಸೆಳೆಯಲು ಮಂಡ್ಯದಲ್ಲಿ ಭರ್ಜರಿ ಬಾಡೂಟದ ವ್ಯವಸ್ಥೆಯನ್ನು ನಾಯಕರು ಜೋರಾಗಿ ಮಾಡುತ್ತಿದ್ದಾರೆ.

ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಮುಖಂಡ ಸಚ್ಚಿದಾನಂದ ಇಂದು ಇಂಡವಾಳು ಗ್ರಾಮದಲ್ಲಿ ಸಾವಿರಾರು ಕಾರ್ಯಕರ್ತರಿಗೆ ಬಾಡೂಟ ಹಾಕಿಸುವ ಮೂಲಕ ಭರ್ಜರಿ ಚುನಾವಣೆ ಪ್ರಚಾರ ಮಾಡಿದ್ರು. ಮೊಟ್ಟೆ, ಚಿಕನ್, ಮಟನ್, ಗೀರೈಸ್ ಸೇರಿದಂತೆ ಬಗೆ ಬಗೆಯ ಭಕ್ಷ್ಯ ಭೋಜನದ ವ್ಯವಸ್ಥೆಯನ್ನು ಕಾರ್ಯಕರ್ತರಿಗೆ ಮಾಡಲಾಗಿತ್ತು.

ಶ್ರೀರಂಪಟ್ಟಣ ಕ್ಷೇತ್ರದ ಶಾಸಕರಾಗಿರುವ ರಮೇಶ್‍ಬಾಬು ಬಂಡಿಸಿದ್ದೇಗೌಡ ಜೆಡಿಎಸ್‍ನಿಂದ ಈಗಾಗಲೇ ಅಮಾನತ್ತಾಗಿದ್ದಾರೆ. ಅವರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಖಚಿತ ಎಂಬ ಮಾತು ಕೇಳಿಬರುತ್ತಿದೆ.

ಆದ್ರೆ ಎಲ್ಲಾ ಊಹಾಪೋಹವನ್ನು ನಿರಾಕರಿಸುತ್ತಿರುವ ಕಾಂಗ್ರೆಸ್ ಮುಖಂಡ ಸಚ್ಚಿದಾನಂದ, ರಮೇಶ್‍ಬಾಬು ಬಂಡಿಸಿದ್ದೇಗೌಡ ಅವರಿಗೆ ಕಾಂಗ್ರೆಸ್‍ನಿಂದ ಎಲ್ಲಾ ರೀತಿಯ ಲೆಕ್ಕ ಚುಕ್ತಾ ಮಾಡಲಾಗಿದೆ. ಅವರಿಗೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡುವುದಿಲ್ಲ. ನಾನೂ ಕೂಡ ಕಾಂಗ್ರೆಸ್ ಪಕ್ಷದ ವರಿಷ್ಠರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಅವರೂ ಕೂಡ ನನಗೆ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ. ಹೀಗಾಗಿ ಪ್ರಚಾರ ಶುರು ಮಾಡಿದ್ದೇನೆ ಅಂತಿದ್ದಾರೆ.

ಪ್ರಚಾರದಲ್ಲಿ ಪಾಲ್ಗೊಂಡು ಭರ್ಜರಿ ಬಾಡೂಟ ಸವಿದ ಕಾರ್ಯಕರ್ತರು ನಮ್ಮ ಸಚ್ಚಿಯಣ್ಣ ಚುನಾವಣೆಯಲ್ಲಿ ಗೆಲ್ಲೋದು ಗ್ಯಾರಂಟಿ ಅಂತಿದ್ದಾರೆ. ಒಟ್ಟಾರೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ.

Comments

Leave a Reply

Your email address will not be published. Required fields are marked *