ಇನ್ಮುಂದೆ ಶಾಲಾ ಕಾಲೇಜುಗಳ ಬಳಿಯೂ ಇಂದಿರಾ ಕ್ಯಾಂಟೀನ್ ಪ್ರಾರಂಭ

ಬೆಂಗಳೂರು: ಬಿಬಿಎಂಪಿ, ಆಸ್ಪತ್ರೆ ಆವರಣಗಳಲ್ಲಿ, ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಪ್ರಾರಂಭವಾಗಿದ್ದ ಇಂದಿರಾ ಕ್ಯಾಂಟೀನ್ ಇನ್ಮುಂದೆ ಸರ್ಕಾರ ಶಾಲಾ-ಕಾಲೇಜುಗಳ ಬಳಿಯೂ ಪ್ರಾರಂಭವಾಗಲಿದೆ.

ಶಾಲಾ ಕಾಲೇಜುಗಳ ಬಳಿ ಇಂದಿರಾ ಕ್ಯಾಂಟೀನ್ ಪ್ರಾರಂಭದ ಕುರಿತು ಬೆಂಗಳೂರು ಅಭಿವೃದ್ಧಿ ಸಚಿವ ಕೆಜೆ ಜಾರ್ಜ್ ಟ್ವೀಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಅಗತ್ಯ ಇರುವ ನಗರದ ಶಾಲಾ ಕಾಲೇಜುಗಳ ಬಳಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗುತ್ತೆ ಅಂತ ತಿಳಿಸಿದ್ದಾರೆ.

ಈಗಾಗಲೇ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ಮಾಡುತ್ತಿದ್ದು ಆದಷ್ಟು ಬೇಗ ಇಂದಿರಾ ಕ್ಯಾಂಟೀನ್ ಶಾಲಾ ಕಾಲೇಜುಗಳಿಗೂ ತಲುಪಲಿವೆ. ಶುಕ್ರವಾರವಷ್ಟೇ ಮೊಬೈಲ್ ಕ್ಯಾಂಟೀನ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನ ಸೌಧದ ಬಳಿ ಚಾಲನೆ ನಿಡಿದ್ದರು.

ರಾಜ್ಯದಲ್ಲಿ ಯಾರೂ ಹಸಿವಿನಿಂದ ಬಳಲಬಾರದು. ಕರ್ನಾಟಕವನ್ನು ಹಸಿವು ಮುಕ್ತಗೊಳಿಸುವುದೇ ನಮ್ಮ ಸರ್ಕಾರದ ಉದ್ದೇಶ. ಅಲ್ಲದೆ ಕಾಲೇಜ್ ಮತ್ತು ಶಾಲೆಗಳಲ್ಲೂ ಇಂದಿರಾ ಕ್ಯಾಂಟೀನ್ ಆರಂಭಿಸುವ ಉದ್ದೇಶ ಇದ್ದು, ಇದರಿಂದ ವಿದ್ಯಾರ್ಥಿಗಳಿಗೆ ಕಡಿಮೆ ಬೆಲೆಗೆ ತಿಂಡಿ ಮತ್ತು ಊಟ ದೊರೆಯಲಿದೆ ಎಂದು ಸಿಎಂ ಹೇಳಿದ್ದರು. ಇದನ್ನೂ ಓದಿ: ಪಿಂಕ್ ಹೊಯ್ಸಳ ಆಯ್ತು, ಈಗ ಪಿಂಕ್ ಟಾಯ್ಲೆಟ್ಸ್- ಮಹಿಳೆಯರ ರಕ್ಷಣೆಗಾಗಿ ಬೆಂಗ್ಳೂರಲ್ಲಿ ಹೊಸ ಶೌಚಾಲಯ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಕನಸಿನ ಯೋಜನೆಯಾಗಿದ್ದ ಇಂದಿರಾ ಕ್ಯಾಂಟಿನ್ ಗೆ ಕಳೆದ ವರ್ಷ  ಆಗಸ್ಟ್ 15ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ಚಾಲನೆ ನೀಡಿದ್ದರು. ಇಂದಿರಾ ಕ್ಯಾಂಟೀನ್ ಯಶಸ್ವಿಯಾಗುತ್ತಿದ್ದ ಬೆನ್ನಲ್ಲೇ ಮುಖ್ಯಮಂತ್ರಿಯವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೆಸರಿನಲ್ಲಿ ಇಂದಿರಾ ಕ್ಲಿನಿಕ್ ಪ್ರಾರಂಭಿಸಿದ್ದಾರೆ. ಹಾಗೆಯೇ ವಿದ್ಯಾರ್ಥಿಗಳ ಮತ್ತು ಮಹಿಳೆಯರ ಅನುಕೂಲಕ್ಕಾಗಿ ಇಂದಿರಾ ಸಾರಿಗೆ ಬಸ್ ವ್ಯವಸ್ಥೆಯನ್ನು ಕೂಡ ಮಾಡಲಾಗುವುದು ಎಂಬುದಾಗಿ ಸಚಿವ ಎಚ್ ಎಂ ರೇವಣ್ಣ ಈ ಹಿಂದೆ ಹೇಳಿದ್ದರು.

Comments

Leave a Reply

Your email address will not be published. Required fields are marked *