ನಾನ್ ಇಲ್ಲಿರಲ್ಲ..ನನ್ನ ಮಠಕ್ಕೆ ಕಳುಹಿಸಿ – ಆಸ್ಪತ್ರೆಯಲ್ಲಿ ಹಠ ಹಿಡಿದ ಸಿದ್ದಗಂಗಾ ಶ್ರೀ

ಬೆಂಗಳೂರು: ಶತಾಯುಷಿ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದ್ದು, ಆಸ್ಪತ್ರೆಯಲ್ಲಿ ನಾನಿರಲ್ಲ.. ನನ್ನನ್ನು ಮಠಕ್ಕೆ ಕಳುಹಿಸಿ ಎಂದು ಶ್ರೀಗಳು ಹಠ ಮಾಡುತ್ತಿದ್ದಾರೆ.

ಸಿದ್ದಗಂಗಾ ಮಠದ ಶ್ರೀ ಶಿವಕುಮಾರಸ್ವಾಮಿ ಸ್ವಾಮೀಜಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಶುಕ್ರವಾರ ನಗರದ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಜಿಎಸ್ ಆಸ್ಪತ್ರೆಯಲ್ಲಿ ಸಿದ್ದಗಂಗಾ ಶ್ರೀಗಳಿಗೆ ಚಿಕಿತ್ಸೆ ಮುಂದುವರಿದಿದ್ದು, ಮುಂಜಾನೆ 6 ಗಂಟೆಗೆ ನುರಿತ ವೈದ್ಯರಿಂದ ವೈದ್ಯಕೀಯ ತಪಾಸಣೆ ನಡೆಸಿದ್ದಾರೆ.

ಇಂದು ಬೆಳಗ್ಗೆ 7.30ರ ಲಿಂಗ ಪೂಜೆ ಬಳಿಕ ಬಿಜಿಎಸ್ ವೈದ್ಯರ ತಂಡ ಸಿಟಿ ಸ್ಕ್ಯಾನ್ ಮಾಡಿದ್ದಾರೆ. ಸಿಟಿ ಸ್ಕ್ಯಾನ್ ಬಳಿಕ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಕಂಡುಬಂದಲ್ಲಿ ಡಿಸ್ಚಾರ್ಜ್ ಮಾಡುವುದಾಗಿ ವೈದ್ಯರು ತಿಳಿಸಿದ್ದರು. ಆದರೆ ಶ್ರೀಗಳು ನಾನು ಆಸ್ಪತ್ರೆಯಲ್ಲಿ ಇರಲ್ಲ. ನನ್ನನ್ನ ಮಠಕ್ಕೆ ಕಳುಹಿಸಿ ಎಂದು ಹಠ ಮಾಡಿದ್ದಾರೆ. ಆದ್ದರಿಂದ ಇಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಶ್ರೀಗಳನ್ನು ಡಿಸ್ಚಾರ್ಜ್ ಮಾಡಲು ವೈದ್ಯರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ರವೀಂದ್ರ, ಶ್ರೀಗಳಿಗೆ ಎಲ್ಲಾ ತಪಾಸಣೆ ಮಾಡಿದ್ದೇವೆ. ನಾವು ಮುಂದಿನ ತಿರ್ಮಾನ ತೆಗೆದುಕೊಳ್ಳುತ್ತಿದ್ದು, ಡಿಸ್ಚಾರ್ಜ್ ಮಾಡಲು ನಿರ್ಧಾರ ಮಾಡಿದ್ದೇವೆ, ಆದರೆ ಮಠಕ್ಕೆ ಹೋದ ನಂತರ 10 ದಿನಗಳ ವಿಶ್ರಾಂತಿ ಪಡೆಯಬೇಕು. ಆದ್ದರಿಂದ ಅಲ್ಲಿಯೂ ಎಲ್ಲಾ ಸಿದ್ಧತೆ ಮಾಡಿದ್ದೇವೆ. ಈಗಾಗಲೇ ಬಂದವರಿಗೆ ದರ್ಶನ ಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *