ಎಬಿವಿಪಿ ಕಾರ್ಯಕರ್ತನ ಕಗ್ಗೊಲೆ- ಎಸ್‍ಡಿಪಿಐ ಸಂಘಟನೆಯ ನಾಲ್ವರ ಬಂಧನ

ತಿರುವನಂತಪುರಂ: ಕೇರಳದಲ್ಲಿ ಎಬಿವಿಪಿ ಕಾರ್ಯಕರ್ತರೊಬ್ಬರನ್ನು ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಶುಕ್ರವಾರ ಬಂಧಿಸಿದ್ದಾರೆ.

ಬಂಧಿತರನ್ನು ಮೊಹಮ್ಮದ್, ಮಿನಿಕ್ಕೊಲದ ಸಲೀಂ, ನೀವೆಲಿ ಅಮೀರ್ ಹಾಗೂ ಶಾಹಿನ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಎಸ್‍ಡಿಪಿಐ ಸದಸ್ಯರು ಎನ್ನಲಾಗಿದೆ.

ಏನಿದು ಘಟನೆ?: ಎಬಿವಿಪಿ ಕಾರ್ಯಕರ್ತ ಹಾಗೂ ಆರ್‍ಎಸ್‍ಎಸ್ ನ ಮುಖ್ಯ ಶಿಕ್ಷಕ್ ಆಗಿದ್ದ ಶ್ಯಾಮ್ ಪ್ರಸಾದ್ ಅವರ ಮೇಲೆ ಶುಕ್ರವಾರ ಸಂಜೆ ಕನ್ನಾವಂ ಸಮೀಪದ ಕೊಮ್ಮೇರಿ ಎಂಬಲ್ಲಿ ತಂಡವೊಂದು ದಾಳಿ ಮಾಡಿತ್ತು. ಕೂಡಲೇ ಶ್ಯಾಮ್ ಪ್ರಸಾದ್ ತಪ್ಪಿಸಿಕೊಂಡು ಅಲ್ಲೆ ಇದ್ದ ಮನೆಯೊಂದಕ್ಕೆ ನುಗ್ಗಲು ಯತ್ನಿಸಿದ್ದರು. ಆದ್ರೆ ಆ ಮನೆಗೆ ಬೀಗ ಜಡಿದಿದ್ದರಿಂದ ಶ್ಯಾಮ್ ಅವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಪರಿಣಾಮ ದುಷ್ಕರ್ಮಿಗಳ ಕೈಗೆ ಸಿಲುಕಿ ಬರ್ಬರವಾಗಿ ಕೊಲೆಯಾಗಿ ಹೋಗಿದ್ದರು ಎಂದು ವರದಿಯಾಗಿದೆ.

ಘಟನೆಯ ಬಳಿಕ ದುಷ್ಕರ್ಮಿಗಳು ವಾಯ್‍ನಾಡಿಗೆ ಪರಾರಿಯಾಗಿದ್ದರು. ಕೊಲೆ ಸಂಬಂಧ ಪೆರಾವೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಸದ್ಯ ಆರೋಪಿಗಳನ್ನು ವಾಯ್‍ನಾಡಿನಲ್ಲಿ ಬಂಧಿಸಲಾಗಿದ್ದು, ಪೆರಾವೂರ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ಬಿಜೆಪಿ ಪ್ರತಿಭಟನೆ: ಎಬಿವಿಪಿ ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿದಂತೆ ಬಿಜೆಪಿ ಶನಿವಾರ ಪ್ರತಿಭಟನೆ ನಡೆಸಿತ್ತು. 12 ಗಂಟೆ ನಡೆಸಿದ ಹರತಾಳದಲ್ಲಿ ವಾಹನಗಳಿಗೆ ವಿನಾಯಿತಿ ನೀಡಲಾಗಿತ್ತು. ಅಲ್ಲದೇ ಬಹುತೇಕ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು.

ಶನಿವಾರ ಸಂಜೆ ಮೃತನ ಅಂತ್ಯಸಂಸ್ಕಾರ ನಡೆದಿದೆ. ಅದಕ್ಕೂ ಮೊದಲು ಮರಣೋತ್ತರ ಪರೀಕ್ಷೆಯ ಬಳಿಕ ಅಂತಿಮ ದರ್ಶನಕ್ಕಾಗಿ ಮೃತನ ಪಾರ್ಥೀವ ಶರೀರವನ್ನು ಪರಿಯರಮ್ ಮೆಡಿಕಲ್ ಕಾಲೇಜಿನಲ್ಲಿ ಇಡಲಾಗಿತ್ತು. ಈ ವೇಳೆ ಸಾವಿರಾರು ಮಂದಿ ಭಾಗವಹಿಸಿ ಅಂತಿಮ ದರ್ಶನ ಪಡೆದ್ರು. ಬಳಿಕ ಶ್ಯಾಮ್ ಪ್ರಸಾದ್ ಮನೆಯಲ್ಲಿ ಅಂತ್ಯ ಸಂಸ್ಕಾರ ನಡೆಯಿತು.

Comments

Leave a Reply

Your email address will not be published. Required fields are marked *