ಶಾಪಿಂಗ್ ಕರೆದುಕೊಂಡು ಹೋಗಿಲ್ಲ ಎಂದು ಗೃಹಿಣಿ ಆತ್ಮಹತ್ಯೆ

ಲಕ್ನೋ: ಪತಿ ಶಾಪಿಂಗ್‍ಗೆ ಕರೆದುಕೊಂಡು ಹೋಗಿಲ್ಲ ಎಂದು ಮನನೊಂದು ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ ಕೇವಿ ನಗರದಲ್ಲಿ ನಡೆದಿದೆ.

23 ವರ್ಷದ ದೀಪಿಕಾ ಆತ್ಮಹತ್ಯೆಗೆ ಶರಣಾದ ಗೃಹಿಣಿ. ಒಂದು ವರ್ಷದ ಹಿಂದೆ ದೀಪಕ್ ದ್ವಿವೇದಿ ಅವರ ಜೊತೆ ಮದುವೆಯಾಗಿದ್ದರು. ದೀಪಕ್ ಶಿಕ್ಷಣ ಇಲಾಖೆಯೊಂದರಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದು, ತಂದೆ ತಾಯಿ ಮತ್ತು ತಮ್ಮನ ಜೊತೆ ವಾಸಿಸುತ್ತಿದ್ದರು.

ದೀಪಿಕಾ ಅವರ ಸಂಬಂಧಿಯೊಬ್ಬರ ಮದುವೆ ಮುಂದಿನ ಫೆಬ್ರವರಿ ತಿಂಗಳಿನಲ್ಲಿ ನಿಶ್ಚಯವಾಗಿತ್ತು. ಮದುವೆಗಾಗಿ ಶಾಪಿಂಗ್ ಮಾಡಬೇಕಾಗಿದ್ದು, ಶನಿವಾರದಂದು ಪತಿ ದೀಪಕ್‍ನನ್ನು ಶಾಪಿಂಗ್ ಕರೆದುಕೊಂಡು ಹೋಗಿ ಎಂದು ದೀಪಿಕಾ ಕೇಳಿದ್ದಾರೆ. ಆದರೆ ಪತಿ ಆಫಿಸ್‍ನಲ್ಲಿ ಕೆಲಸವಿದೆ ಮುಂದಿನ ದಿನ ಅಂದರೆ ಭಾನುವಾರ ಶಾಪಿಂಗ್ ಹೋಗೋಣ ಎಂದು ಹೇಳಿದ್ದಾರೆ. ಇದರಿಂದ ಬೇಸರಗೊಂಡ ದೀಪಿಕಾ ಸಂಜೆ ಪತಿ ಮನೆಗೆ ಬಂದ ನಂತರ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಶನಿವಾರ ನನ್ನ ಪತ್ನಿ ಶಾಪಿಂಗ್ ಹೋಗೋಣ ಎಂದು ಹೇಳಿದ್ದಳು. ಆದರೆ ನಾನು ಕೆಲಸ ಇದ್ದ ಕಾರಣ ಭಾನುವಾರ ಹೋಗೋಣ ಎಂದು ಹೇಳಿದ್ದೆ. ಆದ್ದರಿಂದ ಅವಳು ಬೇಸರ ಮಾಡಿಕೊಂಡಿದ್ದಳು. ಸಂಜೆ ನಾನು ಆಫಿಸ್‍ನಿಂದ ಮನೆಗೆ ಬಂದಾಗ ಆಕೆ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಳು. ಎಷ್ಟು ಬಾಗಿಲು ಬಡಿದರೂ ತೆಗೆಯಲಿಲ್ಲ. ಫೋನ್ ಮಾಡಿದೆ. ಆದ್ರೆ ಕಟ್ ಮಾಡಿದಳು. ಕೊನೆಗೆ ನಾನು ಹೊರಗಡೆಯೇ ಮಲಗಿಕೊಂಡಿದ್ದೆ. ಬೆಳಗ್ಗೆ 6 ಗಂಟೆ ವೇಳೆಗೆ ನಾನು ಮತ್ತೆ ಫೋನ್ ಮಾಡಿದೆ. ಆದ್ರೆ ರೂಮಿನಿಂದ ಯಾವುದೇ ಶಬ್ದ ಕೇಳಿಸಲಿಲ್ಲ. ಬಾಗಿಲು ಬಡಿದರೂ ತೆಗೆಯಲಿಲ್ಲ. ಕೊನೆಗೆ ಬಾಗಿಲು ಮುರಿದು ಒಳಗೆ ಹೋದೆ. ಅವಳು ಫ್ಯಾನಿಗೆ ನೇಣು ಹಾಕಿಕೊಂಡಿದ್ದಳು. ನಾನು ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದೆ ಎಂದು ಪತಿ ದೀಪಕ್ ಹೇಳಿದ್ದಾರೆ.

ದೀಪಿಕಾ ಸಣ್ಣ ಪುಟ್ಟ ವಿಚಾರಗಳಿಗೂ ಬೇಸರ ಮಾಡಿಕೊಂಡು ರೂಂಗೆ ಹೋಗಿ ಬಾಗಿಲು ಹಾಕಿಕೊಳ್ತಿದ್ದರು. ಊಟ ಕೂಡ ಬಿಡುತ್ತಿದ್ದರು ಎನ್ನಲಾಗಿದೆ. ದೀಪಿಕಾ ಕುಟುಂಬಸ್ಥರು ಮರಣೋತ್ತರ ಪರೀಕ್ಷೆಗೆ ನಿರಾಕರಿಸಿದ್ದರು. ಆದ್ರೆ ಪೊಲೀಸರು ಮಾತನಾಡಿದ ನಂತರ ಒಪ್ಪಿಕೊಂಡರು. ಮೃತರ ಸಂಬಂಧಿಕರು ಅತ್ತೆ ಮನೆಯವರ ವಿರುದ್ಧ ಸದ್ಯಕ್ಕೆ ಯಾವುದೇ ಆರೋಪ ಮಾಡಿಲ್ಲ ಎಂದು ವರದಿಯಾಗಿದೆ.

Comments

Leave a Reply

Your email address will not be published. Required fields are marked *