ಕಸ ತುಂಬುವ ವಾಹನದಲ್ಲಿ ಪತ್ರಕರ್ತನ ಮೃತದೇಹ ರವಾನಿಸಿದ್ದ ಪಿಎಸ್‍ಐ ವರ್ಗಾವಣೆ

ಹಾವೇರಿ: ಪತ್ರಕರ್ತನ ಮೃತ ದೇಹವನ್ನು ಕಸ ಸಾಗಿಸುವ ಟ್ರ್ಯಾಕ್ಟರ್ ನಲ್ಲಿ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾನಗಲ್ ಪಿಎಸ್‍ಐ ವರ್ಗಾವಣೆಯಾಗಿದ್ದಾರೆ.

ಹಾವೇರಿ ಎಸ್ಪಿ ಕೆ. ಪರಶುರಾಂ ಹಾನಗಲ್ ಅವರು ಗುರುರಾಜ ಮೈಲಾರ ಅವರನ್ನು ಹಾನಗಲ್ ಪಿಎಸ್‍ಐ ಹುದ್ದೆಯಿಂದ ಜಿಲ್ಲಾ ವಿಶೇಷ ಗುಪ್ತದಳ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಭಾನುವಾರ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಗುಂಡೂರು ಗ್ರಾಮದ ಬಳಿ ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಸುದ್ದಿವಾಹಿನಿ ವರದಿಗಾರ ಮೌನೇಶ ಪೋತರಾಜ್ (29) ಮೃತಪಟ್ಟಿದ್ದರು. ಈ ವೇಳೆ ಸ್ಥಳದಲ್ಲಿ ಮಹಜರು ನಡೆಸಿದ ಪೊಲೀಸರು ಬಳಿಕ ಮೃತದೇಹವನ್ನು ತಾಲೂಕು ಆಸ್ಪತ್ರೆ ಶವಾಗಾರಕ್ಕೆ ಪುರಸಭೆಯ ಕಸ ತುಂಬುವ ವಾಹನದಲ್ಲಿ ಸಾಗಿಸಿದ್ದರು. ಕಸ ತುಂಬುವ ವಾಹನದಲ್ಲಿ ಮೃತದೇಹ ಸಾಗಿಸಿದ್ದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಎಸ್ಪಿ ಪರಶುರಾಂ ಪಿಎಸ್‍ಐಗೆ ವರ್ಗಾವಣೆ ಜೊತೆಗೆ ಇಲಾಖೆ ಶಿಸ್ತು ನಿಯಮಾವಳಿ ಪ್ರಕಾರ ದೋಷಾರೋಪಣ ಪತ್ರ ಹೊರಡಿಸಲಾಗಿದೆ. ಅಲ್ಲದೇ ಪ್ರಕರಣದ ಮೇಲ್ವಿಚಾರಣೆ ಮಾಡುವಲ್ಲಿ ವಿಫಲರಾಗಿರುವ ಹಾನಗಲ್ ಸಿಪಿಐ ರೇವಪ್ಪ ಕಟ್ಟೀಮನಿ ವಿರುದ್ಧವೂ ನೋಟಿಸ್ ಜಾರಿ ಮಾಡಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಎಸ್‍ಪಿ ಕೆ.ಪರಶುರಾಂ ಅವರು, ಭಾನುವಾರ ಮಕರ ಸಂಕ್ರಾಂತಿಯ ಕಾರಣ ಯಾವುದೇ ವಾಹನಗಳು ಸಿಗಲಿಲ್ಲ. ಅಲ್ಲದೇ, ಮೃತದೇಹವನ್ನು ಕೊಂಡೊಯ್ಯಲು ಆಂಬ್ಯುಲೆನ್ಸ್ ಸೇವೆಯೂ ದೊರೆಯಲಿಲ್ಲ. ಅದ್ದರಿಂದ ಸಮೀಪದಲ್ಲೇ ಲಭ್ಯವಿದ್ದ ಟ್ರ್ಯಾಕ್ಟರ್ ಬಳಸಲಾಗಿತ್ತು. ಆದರೆ ಈ ಇದರ ಹಿಂದೆ ಯಾವುದೇ ದುರುದ್ದೇಶ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

Comments

Leave a Reply

Your email address will not be published. Required fields are marked *