ಗುಜರಾತ್ ನಲ್ಲಿ ಅಗ್ನಿ ಅವಘಡ- ಮೂವರು ಬಾಲಕಿಯರ ಸಾವು, 15 ಮಂದಿಗೆ ಗಾಯ

ಅಹಮದಾಬಾದ್: ಅಗ್ನಿ ಅವಘಡದಲ್ಲಿ ಮೂವರು ಹೆಣ್ಣು ಮಕ್ಕಳು ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿರುವ ಘಟನೆ ಗುಜರಾತ್‍ನ ರಾಜ್‍ಕೊಟ್‍ನಲ್ಲಿನ ಪ್ರಾನ್ಸಲಾ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಶುಕ್ರವಾರ ರಾತ್ರಿ ಆಯೋಜನಗೆಗೊಂಡಿದ್ದ ಸ್ವಾಮಿ ಧರ್ಮಬಂಧು ಅವರ ರಾಷ್ಟ್ರಕಥಾ ಶಿಬಿರದ ಸಂದರ್ಭದಲ್ಲಿ ಅಗ್ನಿ ದುರಂತ ಸಂಭವಿಸಿದೆ. ಪರಿಣಾಮ ಶಿಬಿರಲ್ಲಿ ಪಾಲ್ಗೊಂಡಿದ್ದ ಮೂವರು ಹೆಣ್ಣು ಮಕ್ಕಳು ದಾರುಣವಾಗಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 15 ಮಂದಿಗೆ ಗಾಯಗಳಾಗಿದ್ದು, ಸದ್ಯ ಗಾಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಗ್ನಿ ದುರಂತದ ಮಾಹಿತಿ ಪಡೆಯುತ್ತಿದ್ದಂತೆಯೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಈ ಶಿಬಿರದಲ್ಲಿ ಹಲವು ಮಂದಿ ಎನ್‍ಆರ್‍ಐಗಳು ಕೂಡ ಪಾಲ್ಗೊಂಡಿದ್ದರು. ಘಟನೆಯ ಬಳಿಕ ಸುಮಾರು 500 ಮಂದಿಯನ್ನು ಅಗ್ನಿಶಾಮಕ ಸಿಬ್ಬಂದಿ ಸ್ಥಳಾಂತರಿಸಿದ್ದಾರೆ.

ಇಂತಹ ಶಿಬಿರಗಳನ್ನು ಆಯೋಜಿಸುವ ಮೊದಲು ಕೆಲವೊಂದು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಆದ್ರೆ ಈ ಶಿಬಿರವನ್ನು ಆಯೋಜನೆ ಮಾಡುವಾಗ ಆಯೋಜಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಇನ್ನು ಘಟನೆಯ ಬಳಿಕ ಜಿಲ್ಲಾಧಿಕಾರಿ ಹಾಗೂ ಎಸ್‍ಪಿ ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಅಗ್ನಿ ದುರಂತಕ್ಕೆ ನಿಖರ ಕಾರಣವೇನೆಂದು ತಿಳಿದುಬಂದಿಲ್ಲ. ಆದ್ರೆ ಶಾರ್ಟ್ ಸರ್ಕ್ಯೂಟ್ ನಿಂದ ಈ ಅವಘಡ ಸಂಭವಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಇನ್ನೊಂದು ಅಗ್ನಿ ದುರಂತ ಪ್ರಕರಣ ರಾಜಸ್ಥಾನದಲ್ಲಿ ಭಾನುವಾರದಂದು ನಡೆದಿದ್ದು, ಜೈಪುರದಲ್ಲಿನ ವಿದ್ಯಾಸಾಗರದ ಒಂದೇ ಕುಟುಂಬದ ಐವರು ದುರ್ಮರಣಕ್ಕೀಡಾಗಿದ್ದಾರೆ. ಈ ಘಟನೆ ಭಾನುವಾರ ನಡೆದಿದೆ. ಸಿಲಿಂಡರ್ ಸ್ಫೋಟವಾಗಿ ಈ ದುರಂತ ಸಂಭವಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

Comments

Leave a Reply

Your email address will not be published. Required fields are marked *