ಹಕ್ಕಿಗಳ ಹಿಕ್ಕೆ ವಾಸನೆ ಬರುತ್ತದೆಂದು 500 ಕ್ಕೂ ಹೆಚ್ಚು ಹಕ್ಕಿ ಮರಿಗಳ ಮಾರಣಹೋಮ ಮಾಡಿದ್ರು

ಮಂಡ್ಯ: ಹಕ್ಕಿಗಳ ಹಿಕ್ಕೆ ವಾಸನೆ ಬರುತ್ತದೆಂದು ಮರದ ರೆಂಬೆಗಳನ್ನು ಕಡಿದು ಹಾಕಿದ ಪರಿಣಾಮ ಐನೂರಕ್ಕೂ ಹೆಚ್ಚು ಹಕ್ಕಿ ಮರಿಗಳು ನೆಲಕ್ಕೆ ಬಿದ್ದು ನರಳಾಡುತ್ತಿರುವ ಮನಕಲಕುವ ಘಟನೆ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಕಾವೇರಿ ನೀರಾವರಿ ನಿಗಮ ಕಚೇರಿ ಆವರಣದಲ್ಲಿ ಹತ್ತಿ ಮರವಿದ್ದು ಅದರಲ್ಲಿ ಸಾವಿರಾರು ಪಕ್ಷಿಗಳು ಗೂಡು ಕಟ್ಟಿಕೊಂಡು ವಾಸವಾಗಿದ್ದವು. ಪಕ್ಷಿಗಳು ಗೂಡಿನಲ್ಲಿ ಮೊಟ್ಟೆಯಿಟ್ಟು ಮರಿ ಮಾಡಿದ್ದವು. ಹಕ್ಕಿಗಳ ಹಿಕ್ಕೆ ವಾಸನೆ ಬರುತ್ತದೆಂದು ಮೃಗೀಯರಾದ ಕಾವೇರಿ ನೀರಾವರಿ ನಿಗಮ ಕಚೇರಿಯ ಕೆಲವು ಅಧಿಕಾರಿಗಳು ಮರದ ರೆಂಬೆಗಳನ್ನು ಸಂಪೂರ್ಣವಾಗಿ ಕತ್ತರಿಸಿ ಹಾಕಿಸಿದ್ದಾರೆ. ಪರಿಣಾಮ ಗೂಡಿನಲ್ಲಿದ್ದ 500 ಕ್ಕೂ ಹೆಚ್ಚು ಮರಿಗಳು ನೆಲಕ್ಕೆ ಬಿದ್ದು ನರಳಾಡುತ್ತಿವೆ. ಅದರಲ್ಲಿ ಬಹುತೇಕ ಹಕ್ಕಿ ಮರಿಗಳು ಸಾವನ್ನಪ್ಪಿವೆ.

ತಮ್ಮ ಕಣ್ಣ ಮುಂದೆಯೇ ಸಾವನ್ನಪ್ಪುತ್ತಿರುವ ಮರಿಗಳನ್ನು ನೋಡಿ ತಾಯಿ ಹಕ್ಕಿಗಳು, ಅಕ್ಕಪಕ್ಕದ ಮರದಲ್ಲಿ ಕುಳಿತು ಮೂಕರೋಧನೆ ಅನುಭವಿಸುತ್ತಿವೆ. ಹಕ್ಕಿ ಮರಿಗಳ ಮಾರಣ ಹೋಮ ನೋಡಿ ಪುಟಾಣಿ ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಸಾರ್ವಜನಿಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದು, ರೆಂಬೆ ಕತ್ತರಿಸುವ ಮುನ್ನ ಪಕ್ಷಿ ತಜ್ಞರ ಸಲಹೆ ಪಡೆದು ಮೊಟ್ಟೆಯಿಡುವ ಮುಂಚೆ ಕತ್ತರಿಸಬೇಕಿತ್ತು. ಯಾವುದೇ ಮುಂದಾಲೋಚನೆಯಿಲ್ಲದೇ ನೂರಾರು ಹಕ್ಕಿಮರಿಗಳ ಮಾರಣಹೋಮಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *