ಮಂಗಳೂರು: ಇಲ್ಲಿನ ಸುರತ್ಕಲ್ ಸಮೀಪದ ಕಾಟಿಪಳ್ಳ ಎಂಬಲ್ಲಿ ದೀಪಕ್ ರಾವ್ ಹತ್ಯೆ ನಡೆದ ಬಳಿಕ ಜನಸಾಮಾನ್ಯರು ಬಡ ಕುಟುಂಬದ ಪರವಾಗಿ ಸ್ಪಂದಿಸಿದ್ದಾರೆ. ಇದಕ್ಕೆ ಸಾಕ್ಷಿ ದೀಪಕ್ ತಾಯಿಯ ಬ್ಯಾಂಕ್ ಖಾತೆಗೆ ಜಮೆಯಾದ ಹಣ.
ಹೌದು. ದೀಪಕ್ ತಾಯಿ ಪ್ರೇಮಾ ರಾವ್ ಅವರ ಮಂಗಳೂರಿನ ಕಾಟಿಪಳ್ಳದ ಸಿಂಡಿಕೇಟ್ ಬ್ಯಾಂಕಿನಲ್ಲಿ ಬರೋಬ್ಬರಿ 17,43,859 ರೂಪಾಯಿ ಸಂಗ್ರಹವಾಗಿದೆ. ತಂದೆಯನ್ನು ಸಣ್ಣ ವಯಸ್ಸಲ್ಲಿಯೇ ಕಳಕೊಂಡ ದೀಪಕ್ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದರು. ಹೀಗಾಗಿ ದೀಪಕ್ ಕೊಲೆಯಾಗಿದ್ದು ಕುಟುಂಬ ಮತ್ತು ಗ್ರಾಮಸ್ಥರನ್ನು ದಿಗ್ಭ್ರಾಂತಿಗೊಳಿಸಿತ್ತು.

ಈ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ದೀಪಕ್ ತಾಯಿಯ ಅಕೌಂಟ್ ಡಿಟೈಲ್ಸ್ ಹಾಕಿ, ಸಹೃದಯಿಗಳು ಈ ಬಡ ಕುಟುಂಬಕ್ಕೆ ಹಣದ ಸಹಾಯ ನೀಡುವಂತೆ ವಿನಂತಿಸಿಕೊಂಡಿದ್ದರು. ಇದಕ್ಕೆ ಭಾರೀ ಸ್ಪಂದನೆ ವ್ಯಕ್ತವಾಗಿದ್ದು ಒಂದೇ ದಿನದಲ್ಲಿ 17 ಲಕ್ಷಕ್ಕಿಂತ ಹೆಚ್ಚು ಮೊತ್ತ ಜಮಾವಣೆಯಾಗಿದೆ.
ಇನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಹತ್ತು ಲಕ್ಷ ರೂ. ಹಾಗೂ ಬಿಜೆಪಿ ವತಿಯಿಂದ 5 ಲಕ್ಷ ರೂ. ಮತ್ತು ಮಾಜಿ ಸಚಿವ ಕೃಷ್ಣ ಪಾಲೆಮಾರ್ ವೈಯಕ್ತಿಕವಾಗಿ 5 ಲಕ್ಷ ರೂ. ಮೊತ್ತ ನೀಡಿದ್ದಾರೆ. ಈ ಮೂಲಕ ದೀಪಕ್ ಪರವಾಗಿ ಸಮಾಜ ಕಂಬನಿ ಮಿಡಿದಿದೆ ಅನ್ನುವುದಕ್ಕಿದು ಸಾಕ್ಷಿ. ಇದೇ ವೇಳೆ, ದೀಪಕ್ ಕುಟುಂಬಸ್ಥರು ಸ್ಥಳೀಯ ಶಾಸಕ ಮೊಯ್ದೀನ್ ಬಾವಾ ನೀಡಿದ್ದ 5 ಲಕ್ಷ ರೂಪಾಯಿ ಚೆಕ್ಕನ್ನು ನಿರಾಕರಿಸಿದ್ದಾರೆ.

ಬುಧವಾರ ಮಧ್ಯಾಹ್ನ ಸುಮಾರು 1.30ರ ಸಮಯಕ್ಕೆ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ದೀಪಕ್ ರಾವ್ ಅವರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ರು. ಕೂಡಲೇ ಎಚ್ಚೆತ್ತ ಪೊಲೀಸರು ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ಅಜ್ಞಾತ ಸ್ಥಳದಲ್ಲಿರಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
https://www.youtube.com/watch?v=h2ySxt7VrtE
https://www.youtube.com/watch?v=0iJpHrCbDbc




















Leave a Reply