ಕರ್ತವ್ಯ ನಿರತ ಪೊಲೀಸ್ ಪೇದೆ ಮೇಲೆ ಆಟೋ ಚಾಲಕನಿಂದ ಹಲ್ಲೆ

ಬೆಂಗಳೂರು: ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿ ನಡು ರಸ್ತೆಯಲ್ಲಿ ಆಟೋ ನಿಲ್ಲಿಸಿದನ್ನು ಪ್ರಶ್ನಿಸಿದಕ್ಕೆ ಆಟೋ ಚಾಲಕನೊಬ್ಬ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿರುವ ಘಟನೆ ನಗರದ ಕೆ ಆರ್ ಪುರಂ ನಲ್ಲಿ ನಡೆದಿದೆ.

ಕೆ ಆರ್ ಪುರಂ ಬಳಿಯ ದೇವಸಂದ್ರ ನಿವಾಸಿ ನಯಾಜ್ ಎಂಬ ವ್ಯಕ್ತಿಯೇ ಪೊಲೀಸ್ ಪೇದೆ ಮೇಲೆ ಹಲ್ಲೆಗೈದ ಆರೋಪಿ. ಪ್ರಸ್ತುತ ಆರೋಪಿ ನಿಯಾಜ್‍ನನ್ನು ಕೆಆರ್ ಪುರಂ ಪೊಲೀಸರು ಬಂಧಿಸಿದ್ದಾರೆ.

ಇಂದು ಬೆಳಗ್ಗೆ ಸುಮಾರು 10 ಗಂಟೆಗೆ ನಿಯಾಜ್ ನಡುರಸ್ತೆಯಲ್ಲಿ ಆಟೋ ನಿಲ್ಲಿಸಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ದ ಅಂತಾ ಹೇಳಲಾಗಿದೆ. ಸ್ಥಳದಲ್ಲಿದ್ದ ಪೇದೆ ಗೋವಿಂದ್, ಆಟೋ ಹತ್ತಿ ಪೊಲೀಸ್ ಠಾಣೆಗೆ ನಡೆಯಲು ಸೂಚಿಸಿದ್ದಾರೆ. ಈ ವೇಳೆ ಕೋಪಗೊಂಡ ನಯಾಜ್ ಪೇದೆಯನ್ನು ನಿಂದಿಸಿ ಹತ್ತಿರ ದೇವಸಂದ್ರ ಸ್ಮಶಾನದ ಬಳಿ ಕರೆದುಕೊಂಡು ಹೋಗಿ ಆತನ ಸ್ನೇಹಿತರ ನೆರವಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆಟೋವನ್ನು ಅಡ್ಡಾದಿಡ್ಡಿ ಚಾಲನೆ ಮಾಡಿದ ಪರಿಣಾಮ ಎರಡು ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ಓರ್ವ ಪಾದಚಾರಿ ಗಾಯಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಘಟನಾ ಸ್ಥಳಕ್ಕೆ ತಮ್ಮ ಸಹೋದ್ಯೋಗಿ ಪೇದೆ ಶಿವಾನಂದರನ್ನು ಕರೆಸಿಕೊಂಡು ಗೋವಿಂದ್, ಆರೋಪಿ ನಯಾಜ್‍ನನ್ನು ವಶಕ್ಕೆ ಪಡೆದಿದ್ದಾರೆ. ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ಹಾಗೂ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ನಯಾಜ್‍ನನ್ನ ಕೆ ಆರ್ ಪುರಂ ಪೊಲೀಸರು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *