ಬಿಟೆಕ್, ಎಂಜಿನಿಯರಿಂಗ್ ಲವ್ ಸ್ಟೋರಿ: ಆತ್ಮಹತ್ಯೆಗೆ ಒಪ್ಪದ್ದಕ್ಕೆ ಪ್ರೇಯಸಿಯನ್ನು ಕೊಂದು ತಾನು ನೇಣಿಗೆ ಶರಣಾದ!

ಹೈದರಾಬಾದ್: ಪ್ರೇಯಸಿ ಆತ್ಮಹತ್ಯೆಗೆ ಒಪ್ಪದಿದ್ದಕ್ಕೆ ಆಕೆಯನ್ನು ಕೊಂದು ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣ ರಾಜ್ಯದ ಸಿದ್ದಿಪೇಟ್ ಜಿಲ್ಲೆಯ ಮಾಸ್ಕಾನ್‍ಪೇಟ್ ಗ್ರಾಮದಲ್ಲಿ ನಡೆದಿದೆ.

ಎಂ. ಸುಶ್ಮಿತಾ (22) ಪ್ರಿಯಕರನಿಂದಲೇ ಕೊಲೆಯಾದ ದುರ್ದೈವಿ. ಮಧು (25) ಆತ್ಮಹತ್ಯೆಗೆ ಶರಣಾದವನು. ಸುಶ್ಮಿತಾ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದು, ಮಧು ಬಿಟೆಕ್ ವಿದ್ಯಾರ್ಥಿ. ಇವರಿಬ್ಬರು 5 ವರ್ಷಗಳಿಂದ ಪ್ರೀತಿಸುತ್ತಿದ್ದು, ಜಿಲ್ಲೆಯ ಅನಂತರಾಮ್ ಗ್ರಾಮಕ್ಕೆ ಸೇರಿದವಾಗಿದ್ದಾರೆ.

ಸುಶ್ಮಿತಾ ತಮ್ಮ ತಾಯಿ ವೆಂಕಮ್ಮ ಬಳಿ ತಮ್ಮ ಪ್ರೀತಿಯ ಬಗ್ಗೆ ಹೇಳಿದ್ದಾಳೆ. ಆದರೆ ತಾಯಿ ಮಧು ಬೇರೆ ಜಾತಿಗೆ ಸೇರಿದವನು ಎಂದು ನಿರಾಕರಿಸಿದ್ದಾರೆ. ಆದ್ದರಿಂದ ಗುರುವಾರ ಮಧು ಸುಶ್ಮಿತಾಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸುಶ್ಮಿತಾ ಹುಟ್ಟಿದ್ದಾಗ ಆಕೆಯ ತಂದೆ ಮೃತಪಟ್ಟಿರುತ್ತಾರೆ. ನಂತರ ತಾಯಿ ವೆಂಕಮ್ಮ ಅವರೇ ಸುಶ್ಮಿತಾಳನ್ನು ಬೆಳೆಸಿದ್ದು, ಮಗಳಿಗೆ ಶಿಕ್ಷಣ ಕೊಡಿಸಿ ಉತ್ತಮ ಭವಿಷ್ಯ ರೂಪಿಸಬೇಕು ಎಂಬ ಭರವಸೆ ಇಟ್ಟುಕೊಂಡಿದ್ದರು. ಆದರೆ ಇತ್ತೀಚೆಗೆ ಸುಶ್ಮಿತಾಳಿಂದ ದೂರವಿರಲು ಸಾಧ್ಯವಿಲ್ಲ ಎಂದು ಮಧು ಹೈದರಾಬಾದ್‍ಗೆ ಬಂದಿರುತ್ತಾನೆ.

ಗುರುವಾರ ಮಧು ಸಿದ್ದಿಪೇಟ್‍ನಲ್ಲಿ ಗೆಳೆಯನ ಮದುವೆಗೆ ಬಂದಿದ್ದು, ಮದುವೆ ಮುಗಿಸಿಕೊಂಡು ಸುಶ್ಮಿತಾಗೆ ಕರೆ ಮಾಡಿ ಭೇಟಿಯಾಗಬೇಕು ಎಂದು ಹೇಳಿ ಸಮೀಪದ ಕೋಳಿ ಫಾರ್ಮ್ ಗೆ ಬರುವಂತೆ ತಿಳಿಸಿದ್ದಾನೆ. ಸುಶ್ಮಿತಾ ಫಾರ್ಮ್ ಗೆ ಬಂದಾಗ, ಮಧು ಜ್ಯೂಸ್ ಬಾಟಲ್‍ಗೆ ಕೀಟನಾಶಕ ಬೆರೆಸಿ ಸುಶ್ಮಿತಾಗೆ ನಮ್ಮ ಮದುವೆಗೆ ಹಿರಿಯರು ಒಪ್ಪುವುದಿಲ್ಲ ಆದ್ದರಿಂದ ನಾವು ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ಹೇಳಿದ್ದಾನೆ. ಆದರೆ ಇದಕ್ಕೆ ಸುಶ್ಮಿತಾ ನಿರಾಕರಿಸಿ ಅಲ್ಲಿಂದ ಹೋಗಲು ಪ್ರಯತ್ನ ಮಾಡುತ್ತಾಳೆ.

ಈ ಸಂದರ್ಭದಲ್ಲಿ ಮಧು ಆಕೆಯ ಜೊತೆ ವಾದ ಮಾಡಿ ದೈಹಿಕವಾಗಿ ಹಲ್ಲೆ ಮಾಡುತ್ತಾನೆ. ಈ ವೇಳೆ ಆಕೆ ಅಲ್ಲೇ ಕುಸಿದು ಬಿದ್ದು ಸಾವನ್ನಪ್ಪುತ್ತಾಳೆ. ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಧು ಹಲ್ಲೆ ಮಾಡಿದ್ದರಿಂದ ಸುಶ್ಮಿತಾ ತಮ್ಮ ಎರಡು ಕಣ್ಣು ಕಳೆದುಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *