ಕದ್ರಿ ದೇವಸ್ಥಾನದ ಧ್ವನಿವರ್ಧಕದಲ್ಲಿ ಶ್ಲೋಕ ನಿಲ್ಲಿಸಲು ಸಿದ್ಧತೆ- ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

ಮಂಗಳೂರು: ಅನ್ಯಧರ್ಮೀಯರೊಬ್ಬರ ಮನವಿ ಮೇರೆಗೆ ಮಂಗಳೂರಿನ ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಧ್ವನಿವರ್ಧಕದಲ್ಲಿ ಹಾಕುವ ಶ್ಲೋಕವನ್ನು ನಿಲ್ಲಿಸಲು ಸಿದ್ಧತೆ ನಡೆಸುತ್ತಿರೋದು ಬೆಳಕಿಗೆ ಬಂದಿದೆ.

ನಗರದ ಕದ್ರಿ ದೇವಸ್ಥಾನದಲ್ಲಿ ವಿಶೇಷ ದಿನಗಳಲ್ಲಿ ಶ್ಲೋಕ ಮತ್ತು ಭಕ್ತಿಗೀತೆಗಳನ್ನು ಹಾಕುತ್ತಿದ್ದು, ಇದರಿಂದ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಬ್ಲೇನಿ ಡಿಸೋಜಾ ಮಂಗಳೂರು ಮೇಯರ್ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಿಗೆ ಮನವಿ ಮಾಡಿದ್ದಾರೆ. ದೇವಸ್ಥಾನದ ಧ್ವನಿವರ್ಧಕದಿಂದ ಸ್ಥಳೀಯ ಫ್ಲ್ಯಾಟ್ ಗಳಲ್ಲಿ ನೆಲೆಸುವವರಿಗೆ ತೊಂದರೆಯಾಗುತ್ತಿದ್ದು, ದೇವಸ್ಥಾನದ ಒಳಭಾಗಕ್ಕೆ ಕೇಳಿಸುವಂತೆ ಮಾತ್ರ ಹಾಕಲು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಆರು ತಿಂಗಳ ಹಿಂದೆ ಬ್ಲೇನಿ ಡಿಸೋಜಾ ಸೇರಿದಂತೆ ಕೆಲವರು ಸಲ್ಲಿಸಿದ್ದ ಮನವಿಗೆ ಇದೀಗ ಮುಜರಾಯಿ ಇಲಾಖೆಯಿಂದ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಇದು ಹಿಂದೂ ಸಂಘಟನೆಗಳನ್ನು ಕೆರಳಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಜನರ ಶ್ರದ್ಧಾ ಭಕ್ತಿಯ ಕೇಂದ್ರವಾದ ಕದ್ರಿಯ ದೇವಸ್ಥಾನದಲ್ಲಿ ಹಾಕುವ ಶ್ಲೋಕ, ಭಕ್ತಿಗೀತೆಗಳಿಗೆ ಕಡಿವಾಣ ಹಾಕುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದೆ. ಅನ್ಯಧರ್ಮೀಯರ ಮನವಿಗೆ ಸ್ಪಂದಿಸಿ ಧ್ವನಿವರ್ಧಕದಲ್ಲಿ ಹಾಕುವ ಭಕ್ತಿ ಗೀತೆಗಳನ್ನು ನಿಲ್ಲಿಸಿದ್ರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದೆ. ಮಾತ್ರವಲ್ಲ ಚರ್ಚ್, ಮಸೀದಿಗಳಲ್ಲಿ ಹಾಕುವ ಧ್ವನಿವರ್ಧಕಗಳಿಗೂ ಕಡಿವಾಣ ಹಾಕಿ ಎಂಬ ಆಗ್ರಹ ಸಾಮಾಜಿಕ ಜಾಲತಣಗಳಲ್ಲಿ ಆರಂಭಗೊಂಡಿದೆ.

Comments

Leave a Reply

Your email address will not be published. Required fields are marked *