ದಯವಿಟ್ಟು ಕಟೌಟ್‍ ಗಳಿಗೆ ಹಾಲು ಹಾಕಿ ಪೋಲು ಮಾಡ್ಬೇಡಿ: ಅಭಿಮಾನಿಗಳಿಗೆ ಅಪ್ಪು ಮನವಿ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟಿಸಿದ ಅಂಜನಿಪುತ್ರ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ರಾಜ್ಯದ ಹಲವೆಡೆ ಬೆಳಗ್ಗೆ ಸುಮಾರು 5 ಗಂಟೆಗೆ ಚಿತ್ರ ರಿಲೀಸ್ ಆಗಿದೆ. ಈ ಸಮಯದಲ್ಲಿ ಪುನೀತ್ ಅಭಿಮಾನಿಗಳಿಗೆ ಕಟೌಟ್ ಗಳ ಮೇಲೆ ಹಾಲು ಹಾಕದಂತೆ ಟ್ವಿಟ್ಟರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಅಂಜನಿಪುತ್ರ ಚಿತ್ರದ ಬಿಡುಗಡೆ ವೇಳೆ ಪುನೀತ್, “ನಾಳೆ ಬಿಡುಗಡೆ ಆಗುತ್ತಿರುವ ನನ್ನ ಚಿತ್ರ ಅಂಜನಿಪುತ್ರ ಚಿತ್ರಕ್ಕೆ ದಯವಿಟ್ಟು ಕಟೌಟ್ ಗಳ ಮೇಲೆ ಹಾಲು ಹಾರ ಹಾಕಿ ಪೋಲು ಮಾಡುವ ಬದಲು ಹಸಿದ ಮಕ್ಕಳಿಗೆ ಅಥವಾ ವೃದ್ಧರಿಗೆ ಕೊಡಿ. ಸಿನಿಮಾ ಇಷ್ಟ ಆದ್ರೆ ನಿಮ್ಮ ಸ್ನೇಹಿತ ಅಥವಾ ನಿಮ್ಮ ಅಪ್ಪ ಅಮ್ಮ ಜೊತೆ ಇರೋ ಫೋಟೋ ಕಳಿಸಿ, ನನಗೆ ಅದೆ ಖುಷಿ ಕೊಡುತ್ತದೆ” ಎಂದು ಪುನೀತ್ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ.

ರಾಜಕುಮಾರ ಚಿತ್ರದ ಯಶಸ್ಸಿನ ನಂತರ ಪುನೀತ್ ‘ಅಂಜನಿಪುತ್ರ’ ನಾಗಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಹೀಗಾಗಿ ಅಭಿಮಾನಿಗಳು ಕಾತರರಾಗಿದ್ದು, ರಾಜ್ಯದ ಬಹುತೇಕ ಚಿತ್ರಮಂದಿರಗಳು ಹೌಸ್‍ಫುಲ್ ಆಗಿದ್ದು, ರಾಜ್ಯದ್ಯಂತ ಸುಮಾರು 400 ಥಿಯೇಟರ್‍ಗಳಲ್ಲಿ ಸಿನಿಮಾ ಶುರುವಾಗಿದೆ.

ಸ್ಯಾಂಡಲ್ ವುಡ್ ಹನುಮಭಕ್ತ ಎ.ಹರ್ಷ ನಿರ್ದೇಶನದಲ್ಲಿ, ಎಮ್.ಎನ್.ಕುಮಾರ್ ನಿರ್ಮಾಣದಲ್ಲಿ ಅಂಜನಿಪುತ್ರ ಮೂಡಿಬಂದಿದೆ. ಉಗ್ರಂ ಖ್ಯಾತಿಯ ರವಿಬಸ್ರೂರು ಅಂಜನಿಪುತ್ರ ಚಿತ್ರದ ಸಂಗೀತದ ಸಾರಥ್ಯ ವಹಿಸಿದ್ದಾರೆ. ಚಿತ್ರಕ್ಕೆ ಎಂ.ಎನ್. ಕುಮಾರ್ ಅವರು ಬಂಡವಾಳ ಹೂಡಿದ್ದಾರೆ.

ಚಿತ್ರದಲ್ಲಿ ರಮ್ಯಾಕೃಷ್ಣ, ರವಿಶಂಕರ್, ಚಿಕ್ಕಣ್ಣ ಸೇರಿದಂತೆ ಬಹುದೊಡ್ಡ ತಾರಾಗಣವಿದ್ದು, ನಟಿ ಹರಿಪ್ರಿಯಾ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಪವರ್ ಸ್ಟಾರ್‍ಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ರಮ್ಯಾ ಕೃಷ್ಣ ಕೂಡ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *