ನನ್ನ ಬದುಕು ಉಪ್ಪಿಟ್ಟು ಥರ ಆಗಿದೆ: ನಟ ಉಪೇಂದ್ರ

ಬೆಂಗಳೂರು: ನನ್ನ ಬದುಕು ಉಪ್ಪಿಟ್ಟು ಥರ ಆಗಿದೆ, ಈ ದೇಶದಲ್ಲಿ ರಾಜಕೀಯ ಮತ್ತು ಪ್ರಜಾಕೀಯ ಅನ್ನೊದು ಇರಬಾರದು ಎಂದು ನಟ ಉಪೇಂದ್ರ ಹೇಳಿದ್ದಾರೆ.

ನಗರದ ಜೈನ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವಾಗಲೂ ಭವಿಷ್ಯದಲ್ಲಿ ಗುರಿ ಹೇಗೆ ಇಡಬೇಕು ಅಂದರೆ ಪ್ರಪಂಚವನ್ನೇ ಸರಿ ಮಾಡುತ್ತೀನಿ ಎನ್ನುವ ರೀತಿ ಗುರಿ ಇಡಬೇಕು. ಗುರಿ ಎನ್ನುವುದನ್ನ ನಮಗೋಸ್ಕರ ಇಡಬಾರದು ಸಮಾಜಕ್ಕಾಗಿ ಇಡಬೇಕು ಎಂದು ಹೇಳಿದರು.

ಇಡೀ ಪ್ರಪಂಚದಲ್ಲಿ ಎಲ್ಲರನ್ನು ಖುಷಿಯಾಗಿಡಬೇಕು ಎನ್ನುವುದು ನನ್ನ ಗುರಿ. ಇದಕ್ಕಾಗಿ ಫೇಮಸ್ ಆಗಬೇಕೆಂದು ಸಿನಿಮಾಕ್ಕೆ ಕಾಲಿಟ್ಟೆ, ಆದರೆ ನನ್ನ ಬದುಕು ಉಪ್ಪಿಟ್ಟು ತರ ಆಗಿದೆ. ರಾಜಕೀಯ ಎನ್ನುವುದು ಈ ದೇಶದಲ್ಲಿ ಇರಬಾರದು, ಪ್ರಜಾಕೀಯ ಅನ್ನೊದು ಬರಬಾರದು. ವಿಧಾನ ಸೌಧ, ವಿಕಾಸ ಸೌಧ ಮಕ್ಕಳ ಶಾಲೆಯಾಗಬೇಕು ಎಂದು ತಿಳಿಸಿದರು.

ರಾಜರ ಆಡಳಿತದಿಂದ ಹೊರ ಬಂದು ದಶಕಗಳು ಕಳೆದಿದೆ. ಸತ್ ಪ್ರಜೆಗಳೇ ಏಳಿ ಎದ್ದೇಳಿ, ಪ್ರಜಾಕೀಯ ಆ್ಯಪ್ ಬಿಡುಗಡೆ ಆಗಿದೆ, ಅದನ್ನು ಡೌನ್ ಲೋಡ್ ಮಾಡಿಕೊಂಡು ಬಳಸಿರಿ. ನಾಯಕರು ನಾಯಕರಲ್ಲ ಅವರು ಕಾರ್ಮಿಕರು, ರಾಜಕೀಯ ವ್ಯಾಪಾರ, ಕೆಸರಾಟ ನಮಗೆ ಬೇಡ, ರಾಜಕೀಯದಲ್ಲಿ ಬದಲಾವಣೆ ಬೇಕು, ಅದನ್ನು ತರೋಣ ಎಂದು ಸೂಪರ್ ಸಿನಿಮಾದ ಡೈಲಾಗ್ ಹೊಡೆದು ವಿದ್ಯಾರ್ಥಿಗಳನ್ನು ರಂಜಿಸಿದ್ದಾರೆ.

ನಾನು ಬದಲಾವಣೆ ತರಲು ಹೊರಟಿದ್ದೇನೆ. ನಾನು ಸತ್ತರೂ ಏನಾದರು ಸಾಧಿಸಿದ್ದೇನೆ ಎಂಬ ತೃಪ್ತಿ ನನಗೆ ಇರುತ್ತದೆ ಎಂದು ಉಪೇಂದ್ರ ಹೇಳಿದರು. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಟ ಉಪೇಂದ್ರ ಸೇರಿದಂತೆ ಕೆ.ಎಸ್.ಭಗವಾನ್, ರ್ಯಾಪರ್ ಅಲೋಕ್, ಸಾಹಿತಿ ಬೈರಮಂಗಲ ರಾಮೇಗೌಡರು ಪಾಲ್ಗೊಂಡಿದ್ದರು.

 

Comments

Leave a Reply

Your email address will not be published. Required fields are marked *