ಕಾಣೆಯಾಗಿದ್ದ 2 ವರ್ಷದ ಕಂದಮ್ಮ ನೀರಿನ ಟ್ಯಾಂಕ್‍ ನಲ್ಲಿ ಶವವಾಗಿ ಪತ್ತೆ

ನವದೆಹಲಿ: ಮನೆಯ ಹೊರಗಡೆ ಆಟವಾಡುತ್ತಿದ್ದ 2 ವರ್ಷದ ಕಂದಮ್ಮ ಏಕಾಏಕಿ ಕಾಣೆಯಾಗಿ, ಬಳಿಕ ನೀರಿನ ಟ್ಯಾಂಕಿನಲ್ಲಿ ಶವವಾಗಿ ಪತ್ತೆಯಾಗಿರೋ ಘಟನೆ ಚರೋಲಿಯ ದಿಘಿಯಲ್ಲಿ ನಡೆದಿದೆ.

ಮೃತ ದುರ್ದೈವಿ ಬಾಲಕನನ್ನು ಸುಭಾಷ್ ಗೌರವ್ ತಿವಾರಿ ಎಂದು ಗುರುತಿಸಲಾಗಿದೆ. ಮೃತ ಮಗುವಿನ ತಂದೆ ಗೌರವ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಎರಡು ತಿಂಗಳ ಹಿಂದೆಯಷ್ಟೇ ಉತ್ತರಪ್ರದೇಶದಿಂದ ಪುಣೆಗೆ ಬಂದಿದ್ದರು. ಮಗನಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕೆಂದು ಹಾಗೂ ಆತನ ಭವಿಷ್ಯದ ದೃಷ್ಟಿಯಿಂದ ನಾವು ಇಲ್ಲಿಗೆ ಬಂದಿದ್ದೆವು ಅಂತ ಗೌರವ್ ದುಃಖ ತೋಡಿಕೊಂಡರು.

ಕಳೆದ ಭಾನುವಾರ ಮಧ್ಯಾಹ್ನ ತಾಯಿ ಮಗುವಿಗೆ ಊಟ ಮಾಡಿಸುತ್ತಿದ್ದರು. ಈ ಮಧ್ಯೆ ಗ್ಯಾಸ್ ಆಫ್ ಮಾಡಲೆಂದು ಮನೆಯೊಳಗೆ ಹೋಗಿದ್ದರು. ವಾಪಸ್ ಬಂದು ನೋಡಿದಾಗ ಮಗ ಅಲ್ಲಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಮಗನಿಗಾಗಿ ಎಲ್ಲಾ ಕಡೆ ಹುಡುಕಾಡಿದರು. ಮಗ ಎಲ್ಲೂ ಕಾಣಿಸದಿದ್ದಾಗ ಕಿಡ್ನಾಪ್ ಆಗಿರಬಹುದೆಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪೋಷಕರ ದೂರಿನಂತೆ ಪೊಲೀಸರು ಮನೆಗೆ ಬಂದು ಪರಿಶೀಲನೆ ನಡೆಸಿದಾಗ ಮನೆಯ ಪಕ್ಕದಲ್ಲಿದ್ದ ನೀರಿನ ಟ್ಯಾಂಕ್ ಮುಚ್ಚಳ ತೆಗೆದು ನೋಡಿದ್ದಾರೆ. ಈ ವೇಳೆ ಕಂದಮ್ಮನ ಶವ ನೀರಿನಲ್ಲಿ ತೇಲುತ್ತಿರುವುದು ಬೆಳಕಿಗೆ ಬಂದಿದೆ. ಮಗುವಿನ ತಲೆಯ ಮೇಲೆ ಗಾಯಗಳಿದ್ದಿದ್ದರಿಂದ ಆತ ಟ್ಯಾಂಕಿನೊಳಗೆ ಬಿದ್ದು ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸದ್ಯ ಈ ಕುರಿತು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *