ರೈತರಿಗೆ ಮೇಘರಾಜ್ ಕಂಪನಿ ಮೋಸ- ಪರಿಹಾರ ನೀಡದಿದ್ದರೆ ಸಾಮೂಹಿಕ ಆತ್ಮಹತ್ಯೆಯ ಎಚ್ಚರಿಕೆ

ಗದಗ: ಎಲ್ಲಿ ತನಕ ಮೋಸ ಮಾಡೋರು ಇರುತ್ತಾರೋ ಅಲ್ಲಿ ತನಕ ಮೋಸ ಹೋಗೋರು ಇದ್ದೆ ಇರ್ತಾರೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಉತ್ತಮ ಬೆಳೆ ಬರುತ್ತೆ ಎಂದು ರೈತರು ಸಾಲ ಸೋಲ ಮಾಡಿ ಮೆಕ್ಕೆಜೋಳ ಬೆಳೆದರು. ಮೇಘರಾಜ್ ಸೀಡ್ಸ್ ಕಂಪನಿ ಬೆಳೆ ಬೆಳೆಯೋಕೆ ಬೀಜ ನೀಡಿತ್ತು.

ಈ ಕಂಪನಿ ರೈತರಿಗೆ ಇದು 4 ತಿಂಗಳ ಬೆಳೆ. ಗೊಬ್ಬರ, ಕ್ರಿಮಿನಾಶ ಔಷಧ ಸಿಂಪಡಿಸಿ, ಸರಿಯಾಗಿ ನೀರು ಹರಿಸಿದ್ರೆ ಎಕರೆಗೆ ಸುಮಾರು 25 ರಿಂದ 30 ಕ್ವಿಂಟಲ್ ಇಳುವರಿ ಬರುತ್ತೆ ಎಂದು ಕಥೆ ಹೇಳಿ ಕಳಪೆ ಗುಣಮಟ್ಟದ ಬೀಜ ನೀಡಿ ಟೋಪಿ ಹಾಕಿದೆ. ಈ ಆಸೆಗೆ ಬಿದ್ದ ರೈತರು ಸಾಲಸೋಲ ಮಾಡಿ ಬಿತ್ತನೆ ಮಾಡಿದ್ದಾರೆ. ಬೆಳೆ ಏನೋ ಚೆನ್ನಾಗಿ ಬಂತು. ಆದರೆ ತೆನೆ ಬಿಡುತ್ತಿಲ್ಲ. ಬೆಳೆ ಬಾಡುತ್ತಿವೆ. ಹೀಗಾಗಿ ರೈತರು ಇದೀಗ ದಿಕ್ಕು ತೋಚದಂತಾಗಿದ್ದಾರೆ.

ಮೋಸ ಮಾಡಿದ ಸೀಡ್ಸ್ ಕಂಪನಿ ಏಜೆಂಟರಿಗೆ ರೈತರು ಫೋನ್ ಮಾಡಿ ಏನ್ರಿ ಇದೆಲ್ಲಾ ಅಂತ ಕೇಳಿದ್ರೆ ಕ್ಲೈಮೆಟ್‍ನಿಂದ ಹೀಗೆ ಆಗಿದೆ ಎಂದು ಹಾರಿಕೆಯ ಉತ್ತರ ನೀಡಿದ್ದಾರಂತೆ. ಸಾಲ ಮಾಡಿ ಎಕರೆಗೆ 50 ರಿಂದ 60 ಸಾವಿರ ರೂಪಾಯಿ ಖರ್ಚು ಮಾಡಿದ ರೈತರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಪರಿಹಾರ ನೀಡದಿದ್ದರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ.

ಒಟ್ಟಿನಲ್ಲಿ ಈಗಾಗಲೇ ಬರದಿಂದ ಅನ್ನದಾತರು ನೊಂದು ಬೆಂದಿದ್ದಾರೆ. ಈಗ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನಾದರೂ ನೊಂದಿರೋ ರೈತಾಪಿ ವರ್ಗಕ್ಕೆ ಸೂಕ್ತ ಪರಿಹಾರ ನೀಡಬೇಕಿದೆ.

Comments

Leave a Reply

Your email address will not be published. Required fields are marked *