ವಿದ್ಯುತ್ ಕ್ಷಾಮದಲ್ಲಿ ಕರುನಾಡು- ಆರ್‍ಟಿಪಿಎಸ್, ವೈಟಿಪಿಎಸ್‍ನಲ್ಲಿ ಇಲ್ಲ ಕಲ್ಲಿದ್ದಲು

– ಚಳಿಗಾಲದಲ್ಲೇ ಪವರ್ ಕಟ್

ರಾಯಚೂರು: ರಾಜ್ಯದಲ್ಲಿ ವಿದ್ಯುತ್ ಕ್ಷಾಮ ಎದುರಾಗಿದ್ದು, ಬೆಂಗಳೂರಿನಲ್ಲೇ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಹಳ್ಳಿಗಳ ಪಾಡಂತು ಕೇಳುವಂತಿಲ್ಲ. ಇದಕ್ಕೆಲ್ಲಾ ಕಾರಣ ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ.

ರಾಯಚೂರು ಶಕ್ತಿನಗರದಲ್ಲಿರುವ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಾದ ಆರ್‍ಟಿಪಿಎಸ್ ಹಾಗೂ ವೈಟಿಪಿಎಸ್‍ ನಲ್ಲಿ ವಿದ್ಯುತ್ ಉತ್ಪಾದನೆ ಕುಸಿತವಾಗಿದೆ. ಉಳಿದ ವಿದ್ಯುತ್ ಸ್ಥಾವರಗಳಲ್ಲೂ ಉತ್ಪಾದನೆ ಇಳಿಮುಖವಾಗಿದ್ದು, 7,758 ಮೆಗಾ ವ್ಯಾಟ್ ವಿದ್ಯುತ್ ಗೆ ಬೇಡಿಕೆ ಇದೆ. ಆದರೆ ಉತ್ಪಾದನೆಯಾಗುತ್ತಿರೋದು ಮಾತ್ರ 4,408 ಮೆಗಾ ವ್ಯಾಟ್ ವಿದ್ಯುತ್ ಮಾತ್ರ. 1,720 ಮೆಗಾ ವ್ಯಾಟ್ ಉತ್ಪಾದನಾ ಸಾಮಥ್ರ್ಯದ ಆರ್‍ಟಿಪಿಎಸ್ ನಲ್ಲಿ ಕೇವಲ 1,307 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

ರಾಯಚೂರು ನಗರಕ್ಕೆ 120 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆಯಿದ್ದು, ಕೇವಲ 60 ಮೆಗಾ ವ್ಯಾಟ್ ವಿದ್ಯುತ್ ಪೂರೈಕೆಯಾಗುತ್ತಿದೆ. ಹೀಗಾಗಿ ಸಣ್ಣ ಕೈಗಾರಿಕೆಗಳು, ಕಚೇರಿಗಳು ಹಾಗೂ ಸಾರ್ವಜನಿಕರು ಲೋಡ್ ಶೆಡ್ಡಿಂಗ್ ನಿಂದ ಬೇಸತ್ತು ಹೋಗಿದ್ದಾರೆ. ಮಿಲ್ ಗಳಿಗೆ ತಮ್ಮ ಉತ್ಪನ್ನಗಳನ್ನ ಮಾರಾಟ ಮಾಡಿರುವ ರೈತರು ಮಿಲ್ ಗಳು ಬಂದಾಗಿರುವುದರಿಂದ ಹಣ ಸಿಗದೇ ಪರದಾಡುತ್ತಿದ್ದಾರೆ. ಆದರೆ ಜೆಸ್ಕಾಂ ಅಧಿಕಾರಿಗಳು ಮಾತ್ರ ಲೋಡ್ ಶೆಡ್ಡಿಂಗ್ ಅನಿವಾರ್ಯ ಎಂದು ಹೇಳುತ್ತಿದ್ದಾರೆ.

ಕಲ್ಲಿದ್ದಲು ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಕ್ಷಾಮ ಎದುರಾಗಿದೆ. ವಿದ್ಯುತ್ ಉತ್ಪಾದನೆಗೆ ಬೇಕಾದ ಕಲ್ಲಿದ್ದಲನ್ನು ಕೇಂದ್ರ ಸರ್ಕಾರ ಪೂರೈಕೆ ಮಾಡುವುದರಿಂದ ಕೇಂದ್ರ ಸರ್ಕಾರದ ಸಚಿವರ ಜೊತೆ ಸಮನ್ವಯತೆ ಸಾಧಿಸಿ ಕಲ್ಲಿದ್ದಲು ಸರಬರಾಜಿಗೆ ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದರೆ ಬೆಂಗಳೂರು ಸೇರಿದಂತೆ ಇಡೀ ಕರ್ನಾಟಕವೇ ಕತ್ತಲ ಭಾಗ್ಯಕ್ಕೆ ಒಳಗಾಗೋದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ.

Comments

Leave a Reply

Your email address will not be published. Required fields are marked *