ಹುಬ್ಬಳ್ಳಿ: ನಗರದಲ್ಲಿ ಇಂದು ಏರ್ಪಡಿಸಲಾಗಿದ್ದ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಸಮಾವೇಶ ಒಂದು ಕಡೆ ಯಶಸ್ವಿಯಾದರ ಮತ್ತೊಂದು ಕಡೆ ಭಾರೀ ವಿವಾದಕ್ಕೆ ಕಾರಣವಾಗಿದೆ.
ಸಮಾವೇಶದಲ್ಲಿ ಭಾಗವಹಿಸಿದ್ದ ಸ್ವಾಮೀಜಿಗಳು ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದರು. ಸಮಾವೇಶದಲ್ಲಿ ಭಾಗವಹಿಸಿದ್ದ ಪಂಚಮಸಾಲಿ ಪೀಠದ ಮೃತ್ಯುಂಜಯ ಸ್ವಾಮೀಜಿಗಳು ಮಾತನಾಡುತ್ತಾ ಒಂದು ತಂದೆಗೆ ಹುಟ್ಟಿದವರು ಲಿಂಗಾಯತರು ಐದು ಜನಕ್ಕೆ ಹುಟ್ಟಿದವರು ವೀರಶೈವರ ಎನ್ನುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಭಾಷಣ ವೇಳೆ ಅವೇಶಭರಿತರಾಗಿ ಮಾತನಾಡಿದ ಅವರು ಮನುವಾದಿಗಳ ಕುತಂತ್ರಕ್ಕೆ ತಕ್ಕ ಉತ್ತರವನ್ನು ಬಸವರಾಜ ಹೊರಟ್ಟಿ ಹಾಗೂ ವಿನಯ್ ಕುಲಕರ್ಣಿಯವರು ಕೊಟ್ಟಿದ್ದಾರೆ. ಹುಬ್ಬಳ್ಳಿ ಅಂದರೆ ಸಾಕಷ್ಟು ಇತಿಹಾಸ ಪುರುಷರಿಗೆ ಜನ್ಮ ನೀಡಿದೆ. ಲಿಂಗಾಯತರಿಗೆ ಯಾವಾಗಲೂ ಬಸವಣ್ಣನೇ ತಂದೆಯಾಗಿರುತ್ತಾನೆ ಎಂದು ಹೇಳಿದ್ದಾರೆ.

ಇನ್ನು ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ ಮರುಕ್ಷಣವೇ ಸ್ವಾಮೀಜಿ ತಮ್ಮ ಹೇಳಿಕೆಗೆ ಉಲ್ಟಾ ಹೊಡೆದಿದ್ದಾರೆ. ತಮ್ಮ ಹೇಳಿಕೆ ಕುರಿತು ಸ್ಪಷ್ಟಣೆ ನೀಡಿದ ಸ್ವಾಮೀಜಿ, ಬಸವಣ್ಣನವರ ಅನುಯಾಯಿಗಳು ಒಬ್ಬ ತಂದೆ ಇದ್ದ ಹಾಗೆ, ವೀರಶೈವರು ಪಂಚ ಪೀಠದ ಅನುಯಾಯಿಗಳು ಅವರು ಐದು ಜನರ ಆರಾಧಕರು ಹೀಗಾಗಿ ಅವರು ಐದು ತಂದೆಯ ಮಕ್ಕಳು ಎಂದು ಹೇಳಿದೆ. ಆದರೆ ಯಾವುದೇ ಸಮುದಾಯದ ಜನರಿಗೆ ನೋವು ಉಂಟು ಮಾಡುವುದು ನನ್ನ ಉದ್ದೇಶವಲ್ಲ. ಯಾರು ನನ್ನ ಮಾತನ್ನು ತಪ್ಪಾಗಿ ತಿಳಿಯಬೇಡಿ ಇದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆಂದು ಸ್ಪಷ್ಟಣೆ ನೀಡಿದ್ದಾರೆ.

ಧರ್ಮಕ್ಕಾಗಿ ಹೋರಾಟ ಘೋಷಣೆ: ಅದು ಕಳೆದ ನಾಲ್ಕೈದು ತಿಂಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಪ್ರತ್ಯೇಕ ಧರ್ಮದ ಹೋರಾಟ ಕೆಲವು ರಾಜಕೀಯ ಮನ್ವಂತರಕ್ಕೆ ನಾಂದಿ ಹಾಡಿದೆ. ರಾಜ್ಯ ವಿಧಾನಸಭೆ ಚುನಾವಣೆ ಸಮೀಪವಾಗುತ್ತಿದ್ದಂತೆ ಪ್ರತ್ಯೇಕ ಧರ್ಮ ಕೂಗೂ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶಕ್ಕೆ ಸಾಗರೋಪಾದಿಯಲ್ಲಿ ಜನರು ಹರಿದು ಬಂದಿದ್ದರು. ಸಮಾವೇಶದದ ಯಾವ ಭಾಗದಲ್ಲಿ ನೋಡಿದರು ಜನ ಸಾಗರ ಕೈಯಲ್ಲಿ ಕೆಂಪು ಬಾವುಟ ಹಿಡಿದಕೊಂಡು ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಒಗ್ಗಟಾಗಿ ಹೋರಾಟ ನಡೆಸುವ ದೃಶ್ಯಗಳು ಕಂಡು ಬಂತು. ಇಂದು ನಡೆದ ಹೋರಾಟ ಲಿಂಗಾಯತ ಪ್ರತ್ಯೇಕ ಧರ್ಮದ ಸ್ಥಾಪನೆಯ ಸೆಮಿಪೈನಲ್ ಆಗಿ ಕಂಡು ಬಂತು. ಈ ಹಿಂದೆ ಬೀದರ್, ಕಲಬುರಗಿ, ಬೆಳಗಾವಿ ಯಲ್ಲಿ ನಡೆದ ಸಮಾವೇಶಗಳು ಇದಕ್ಕೆ ಸಾಕ್ಷಿಯಾಗಿವೆ. ಸಮಾವೇಶದಲ್ಲಿ ನಿರಂತರವಾಗಿ ಬಸವಣ್ಣನ ಅನುಯಾಯಿಗಳು ಎಲ್ಲರ ತಲೆಯ ಮೇಲೆ ಧರ್ಮಕ್ಕಾಗಿ ಹೋರಾಟ ಅನ್ನೋ ಘೋಷಣೆಗಳನ್ನು ಕೂಗಿದರು.

ಶಪಥ: ಇಂದು ಬೆಳ್ಳಗೆ 11 ಗಂಟೆಗೆ ಬಸವಣ್ಣನ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಲಿಂಗಯತ ಧರ್ಮಕ್ಕೆ ಸಂಬಂಧಪಟ್ಟ ಸಂಸ್ಕ್ರತ ಗ್ರಂಥ ಹಾಗೂ ವಚನ ಸಾಹಿತ್ಯ ಪುಸ್ತಕಗಳನ್ನು ಚಿತ್ರದುರ್ಗದ ಮುರುಘಾ ಶ್ರೀಗಳಿಂದ ಬಿಡುಗಡೆ ಮಾಡಲಾಯಿತು. ನಂತರ ವೇದಿಕೆಯಲ್ಲಿದ್ದ ಗಣ್ಯರು ಸೇರಿ ಎಲ್ಲರೂ ಒಟ್ಟಾಗಿ ಲಿಂಗಾಯತ ಧರ್ಮಕ್ಕಾಗಿ ನಡೆಯುತ್ತಿರೋ ಹೋರಾಟ ಪ್ರತ್ಯೇಕ ಧರ್ಮ ಆಗೋವರೆಗೂ ಹಿಂದೆ ಸರಿಯುವುದಿಲ್ಲ ಎನ್ನುವ ಶಪಥ ಮಾಡಿದರು.
ಈ ವೇಳೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಲಿಂಗಾಯತ ಏಜುಕೇಷನ್ ಸೊಸೈಟಿಯ ಪ್ರಭಾಕರ್ ಕೊರೆ ಹಾಗೂ ವಿಪಕ್ಷ ನಾಯಕ ಶೆಟ್ಟರ್ ವಿರುದ್ಧ ವಾಗ್ಧಾಳಿ ನಡೆಸಿದರು. ನೀವು ಚುನಾವಣೆ ಗೆಲ್ಲಲು, ಲಿಂಗಾಯತ ವೋಟ್ ಬ್ಯಾಂಕ್ ಬೇಕು ಆಂದರೆ ನೀವು ವೀರಶೈವರ ಬಾಲ ಹಿಡಿದುಕೊಂಡು ಬೇಡಿ. ಲಿಂಗಾಯತ ಧರ್ಮದಲ್ಲಿ 99 ಒಳ ಪಂಗಡಗಳನ್ನು ಹೊಂದಿದ್ದು, ಇದರಲ್ಲಿ ವೀರಶೈವ ಸೇರಿದೆ. ಇಲ್ಲಿ ಸೇರಿರುವ ಎಲ್ಲಾ ಮುಖಂಡರ ಜಾತಿ ಪ್ರಮಾಣ ಪತ್ರದಲ್ಲಿ ಲಿಂಗಾಯತ ಎಂದಿದೆ. ವಿನಯ್ ಕುಲಕರ್ಣಿ, ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ್ ಹೊರಟ್ಟಿ ಅವರ ಪ್ರಮಾಣ ಪತ್ರದಲ್ಲಿಯೂ ಲಿಂಗಾಯತ ಎಂದಿದೆ. ವೀರಶೈವ ಎಂದು ಎಲ್ಲಿಯೂ ದಾಖಲಾಗಿಲ್ಲ ಎಂದು ಟೀಕೆ ಮಾಡಿದರು.

ಬಳಿಕ ನೆಹರು ಮೈದಾನದಿಂದ ಎಲ್ಲಾ ಲಿಂಗಾಯತ ಮುಖಂಡರು ಹಾಗೂ ಮಠಧೀಶರ ನೈತೃತ್ವದಲ್ಲಿ ಬೃಹತ್ ಮೆರವಣಿಗೆ ಮಾಡಲಾಯಿತು. ನೆಹರು ಮೈದಾನದಿಂದ ಲಕ್ಷ ಲಕ್ಷ ಸಂಖ್ಯೆಯಲ್ಲಿ ಹೊರಟ ಬಸವಣ್ಣನ ಅನುಯಾಯಿಗಳು ನಗರದ ಕೊಪ್ಪಿಕರ್ ರೋಡ್, ಕೋಯಿನ್ ರಸ್ತೆ ಮೂಲಕ ಚೆನ್ನಮ್ಮ ವೃತ್ತದವರೆಗೆ ನಡೆದು ರಾಣಿ ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಶಕ್ತಿ ಪ್ರದರ್ಶನ ನೀಡಿದರು.

ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅನೇಕ ಸಚಿವರು ಮಠಾಧೀಶರು ಲಿಂಗಾಯತ ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಆದಷ್ಟು ಬೇಗ ಸರ್ಕಾರದಿಂದ ಮಾನ್ಯತೆ ಕೊಡಿಸುವುದಾಗಿ ಭರವಸೆ ನೀಡಿದರು. ಇನ್ನೂ ಸಮಾವೇಶದಲ್ಲಿ ಮಾತನಾಡಿದ ವಿವಿಧ ಮಠಾಧೀಶರು, ನಮ್ಮಲ್ಲಿ ವೀರಶೈವರೂ ಧರ್ಮ ಒಡೆಯುವ ಹುನ್ನಾರ ಮಾಡುತ್ತಿದ್ದಾರೆ. ನಮ್ಮಲ್ಲಿ ವೀರಶೈವ-ಲಿಂಗಾಯತ ಅಂತ ಇಷ್ಟು ದಿನ ತುಳಿದಿದ್ದಾರೆ. ಇನ್ನು ಮುಂದೆ ನಾವು ಯಾರು ಮೋಸ ಹೋಗಬಾರದು. ನಾವು ಯಾರು ರಾಜಕೀಯ ಲಾಭಕ್ಕಾಗಿ ಸಮಾವೇಶ ಮಾಡುತ್ತಿಲ್ಲ. ಬದಲಾಗಿ ನಮಗೆ ವೋಟು ಕೊಟ್ಟ ಜನರ ಋಣ ತೀರಿಸೋ ಕೆಲಸ ಮಾಡಿತ್ತಿದ್ದೇವೆ ಎಂದರು.








Leave a Reply