ಅಮಿತ್ ಶಾ ಬಿಜೆಪಿ ನಾಯಕರಿಗೆ ಸುಳ್ಳು ಹೇಳುವುದನ್ನು ಹೇಳಿಕೊಡುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕೇಂದ್ರದ ಅನುದಾನವನ್ನು ಸರ್ಕಾರ ಸರಿಯಾಗಿ ಬಳಕೆ ಮಾಡಿಲ್ಲ ಎಂಬ ಅಮಿತ್ ಶಾ ಅವರ ಹೇಳಿಕೆಗೆ ಟ್ವಿಟ್ಟರ್ ಮೂಲಕ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ, ಕೇಂದ್ರ ನೀಡುವ ಅನುದಾನ ರಾಜ್ಯ ಸಂಗ್ರಹಿಸುವ ತೆರಿಗೆ ಹಣದಿಂದ ನೀಡುತ್ತದೆ. ಅನುದಾನವನ್ನು ನೀಡುವುದು ಹಣಕಾಸು ಆಯೋಗವೇ ಹೊರತು ಸರ್ಕಾರವಲ್ಲ ಎಂದು ಹೇಳಿದ್ದಾರೆ.

ಅಲ್ಲದೇ ರಾಜ್ಯ ಸರ್ಕಾರ ಅನುದಾನವನ್ನು ಸರಿಯಾಗಿ ಬಳಕೆ ಮಾಡಿಲ್ಲ ಅಂದರೆ ಸದನದ ವಿರೋಧಿ ಪಕ್ಷದ ನಾಯಕರು ಅಧಿವೇಶನದಲ್ಲಿಯೇ ಮಾತನಾಡಬಹುದು. ಆದರೆ ಬಿಜೆಪಿ ನಾಯಕರು ಈ ಕುರಿತು ಒಮ್ಮೆಯು ಪ್ರಶ್ನೆ ಮಾಡಿಲ್ಲ. ಅಮಿತ್ ಶಾ ಬಿಜೆಪಿ ನಾಯಕರಿಗೆ ಸುಳ್ಳು ಹೇಳಿ ಕೊಡುತ್ತಿದ್ದಾರೆ. ಕೇಂದ್ರ ಸರ್ಕಾರ ಅನುದಾನ ಪಡೆಯುವುದು ನಮ್ಮ ಹಕ್ಕು ಎಂದು ಹೇಳಿದರು.

ರಾಜ್ಯ ಸರ್ಕಾರಕ್ಕೆ ಕನ್ನಡ ರಾಜ್ಯೋತ್ಸವ ನಡೆಸಲು ಆಸಕ್ತಿ ಇಲ್ಲ, ಟಿಪ್ಪು ಜಯಂತಿ ಆಚರಿಸಲು ಹೆಚ್ಚು ಉತ್ಸುಕವಾಗಿದೆ ಎನ್ನುವ ಅಮಿತ್ ಶಾ ಹೇಳಿಕೆ ಪ್ರತಿಕ್ರಿಯಿಸಿರುವ ಸಿಎಂ, ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಎಂದು ರಾಷ್ಟ್ರಪತಿಗಳೇ ತಮ್ಮ ಭಾಷಣದಲ್ಲಿ ಒಪ್ಪಿಕೊಂಡಿದ್ದಾರೆ. ಅಮಿತ್ ಶಾ ಅವರಿಗೆ ಇತಿಹಾಸ ಗೊತ್ತಿಲ್ಲದೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

ಇನ್ನೂ ರಾಜ್ಯದಲ್ಲಿ ನಡೆಯುತ್ತಿರುವ ಖಾಸಗಿ ಆಸ್ಪತ್ರೆ ವೈದ್ಯರ ಪ್ರತಿಭಟನೆ ವಿಚಾರ ಕುರಿತ ಪ್ರಶ್ನೆಗೆ, ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೂ ನಿರಂತರವಾಗಿ ಸೇವೆಯನ್ನು ನೀಡುವಂತೆ ಸೂಚಿಸಿದ್ದೇವೆ. ಅಲ್ಲದೇ ಔಷಧಿಗಳ ಪೂರೈಕೆಯಲ್ಲೂ ಯಾವುದೇ ವ್ಯತ್ಯಾಸ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ವೈದ್ಯರ ಬೇಡಿಕೆಗಳನ್ನು ಈಡೇರಿಸಲು ಕಾಯ್ದೆಯಲ್ಲಿ ತಿದ್ದುಪಡಿಯನ್ನು ಮಾಡಲಾಗಿದ್ದು, ಸದನದಲ್ಲಿ ಮಂಡನೆ ಮಾಡಿ ಚರ್ಚೆ ನಡೆಸಬೇಕಿದೆ. ಈಗಾಗಲೇ ವೈದ್ಯರ ಜೊತೆ ಹಲವು ಬಾರಿ ಚರ್ಚೆಯನ್ನು ನಡೆಸಿದ್ದು. ಹೀಗಿದ್ದರು ವೈದ್ಯರು ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *