ಎನ್‍ಟಿಪಿಸಿ ದುರಂತ- ಸಾವಿನ ಸಂಖ್ಯೆ 20ಕ್ಕೆ ಏರಿಕೆ, ರಾಯ್‍ಬರೇಲಿಯ ಆಸ್ಪತ್ರೆಗೆ ರಾಹುಲ್ ಗಾಂಧಿ ಭೇಟಿ

ಲಕ್ನೋ: ಉತ್ತರಪ್ರದೇಶದ ರಾಯ್‍ಬರೇಲಿಯಲ್ಲಿ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮಕ್ಕೆ (ಎನ್‍ಟಿಪಿಸಿ)ಸೇರಿದ ಸ್ಥಾವರದಲ್ಲಿ ಬುಧವಾರದಂದು ಸ್ಫೋಟ ಸಂಭವಿಸಿದ್ದು, ಸಾವಿನ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

ಈವರೆಗೆ 20 ಜನ ಮೃತಪಟ್ಟಿರುವುದಾಗಿ ಜಿಲ್ಲಾ ಆಡಳಿತ ದೃಢಪಡಿಸಿದೆ. ಘಟನೆಯಲ್ಲಿ 90 ರಿಂದ 100 ಮಂದಿ ಗಾಯಗೊಂಡಿದ್ದಾರೆ. ತೀವ್ರವಾಗಿ ಸುಟ್ಟ ಗಾಯಗಳಾಗಿರುವ 22 ಮಂದಿಯನ್ನು ಲಕ್ನೋದ ಆಸ್ಪತ್ರೆಗೆ ರವಾನಿಸಲು ಸೂಚಿಸಲಾಗಿದೆ. ಇನ್ನುಳಿದ 15 ಮಂದಿ ರಾಯ್‍ಬರೇಲಿಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಉತ್ತರಪ್ರದೇಶದ ಎಡಿಜಿ ಆನಂದ್ ಕುಮಾರ್ ಹೇಳಿದ್ದಾರೆ.

ಮೃತರ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಸೋನಿಯಾ ಗಾಂಧಿ ಪ್ರತಿನಿಧಿಸುವ ರಾಯ್‍ಬರೇಲಿಗೆ ಇಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆಗಮಿಸಿದ್ದು, ರಾಯ್‍ಬರೇಲಿಯ ಜಿಲ್ಲಾಸ್ಪತ್ರೆಯಲ್ಲಿ ಗಾಯಾಳುಗಳನ್ನ ಭೇಟಿಯಾಗಿದ್ದಾರೆ

ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ, ಗಂಭೀರ ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ದುರಂತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಈ ದುರಂತದಿಂದ ತುಂಬಾ ನೋವಾಗಿದೆ. ಗಾಯಾಳುಗಳು ಬೇಗನೆ ಗುಣಮುಖರಾಗಲಿ ಎಂದು ಟ್ವೀಟ್ ಮಾಡಿದ್ದಾರೆ.

ಘಟನೆಗೆ ನಿರ್ದಿಷ್ಟ ಕಾರಣ ತಿಳಿಯಲು ಎನ್‍ಟಿಪಿಸಿ ತನಿಖೆ ಆರಂಭಿಸಿದೆ.

 

 

Comments

Leave a Reply

Your email address will not be published. Required fields are marked *