ಹೊಯ್ಸಳ ಪೊಲೀಸರ ಮೇಲೆ ಲಾಂಗ್ ಬೀಸಿದ ಸುಲಿಗೆಕೋರರು

– ಹೋಂಗಾರ್ಡ್ ಗೆ ಲಾಂಗ್‍ನಿಂದ ಹಲ್ಲೆ, ಎಎಸ್‍ಐ ಬಚಾವ್

ಬೆಂಗಳೂರು: ನಗರದಲ್ಲಿ ಸುಲಿಗೆಗಾರರ ಹವಾಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಸ್ತೆ ಬದಿಯಲ್ಲಿ ನಿಲ್ಲಿಸುವ ಕ್ಯಾಬ್‍ಗಳಲ್ಲಿ ಸುಲಿಗೆ ಮಾಡುತ್ತಿದ್ದ ದುಷ್ಕರ್ಮಿಗಳ ತಂಡವೊಂದು ಹೊಯ್ಸಳ ಪೊಲೀಸರ ಮೇಲೆ ದಾಳಿಯ ಮಾಡಿರುವ ಘಟನೆ ತಡರಾತ್ರಿ ನಡೆದಿದೆ.

ಎರಡು ಡಿಯೋ ಬೈಕ್ ನಲ್ಲಿ ಮುಸುಕು ಹಾಕಿಕೊಂಡು ನಾಲ್ವರು ಸುಲಿಗೆಕೋರರು ಬಂದಿದ್ದಾರೆ. ಈ ವೇಳೆ ನಗರದ ಬಿಇಎಲ್ ಸರ್ಕಲ್‍ನಲ್ಲಿ ರಾತ್ರಿ ಸುಮಾರು 2.30 ಕ್ಕೆ ಪಾರ್ಕ್ ಮಾಡಿದ್ದ ಕ್ಯಾಬ್ ಚಾಲಕರಿಗೆ ಲಾಂಗ್ ಮಚ್ಚುಗಳನ್ನು ತೋರಿಸಿ ಕ್ಯಾಬ್ ಚಾಲಕರ ಬಳಿಯಿದ್ದ ಹಣ, ಪರ್ಸ್, ಮೊಬೈಲ್ ಕಸಿದುಕೊಂಡು ಬಿಇಎಲ್ ಸರ್ಕಲ್ ನಿಂದ ಗಂಗಮ್ಮನಗುಡಿ ಸರ್ಕಲ್ ಕಡೆಗೆ ಪರಾರಿಯಾಗಿದ್ದಾರೆ.

ಹಣ ಕಳೆದುಕೊಂಡ ಕ್ಯಾಬ್ ಚಾಲಕ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ದೂರು ನೀಡಿದ್ದರು. ರಾತ್ರಿ ಗಸ್ತಿನಲ್ಲಿದ್ದ ಜಾಲಹಳ್ಳಿ ಪೊಲೀಸ್ ಹೊಯ್ಸಳ ಸಿಬ್ಬಂದಿ ದರೋಡೆಕೋರರ ಬೆನ್ನತ್ತಿದ್ದಾರೆ. ಈ ವೇಳೆ ಹೊಯ್ಸಳ ಸಿಬ್ಬಂದಿ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ತಮ್ಮ ಬಳಿಯಿದ್ದ ಲಾಂಗ್ ಮಚ್ಚಿನಿಂದ ದರೋಡೆಕೋರರು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯ ಪರಿಣಾಮ ಹೋಂಗಾರ್ಡ್ ಹನುಮಂತರಾಜು ಎಂಬವರ ತಲೆಗೆ ಲಾಂಗಿನಿಂದ ಹೊಡೆದು ಪರಾರಿಯಾಗಿದ್ದಾರೆ.

ಸದ್ಯಕ್ಕೆ ಹೋಂಗಾರ್ಡ್ ಹನುಮಂತರಾಜು ಅವರನ್ನು ಕೆ ಸಿ ಜನರಲ್ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಯ್ಸಳದಲ್ಲಿದ್ದ ಎಎಸ್‍ಐ ಮೋಪುರಿ ಎಂಬವರು ಕೂದಲೆಳೆಯಲ್ಲಿ ಪಾರಾಗಿದ್ದಾರೆ. ಈ ಸಂಬಂಧ ಜಾಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದರೋಡೆಕೋರರ ಬಂಧನಕ್ಕೆ ಬಲೆ ಬಿಸಿದ್ದಾರೆ.

 

Comments

Leave a Reply

Your email address will not be published. Required fields are marked *