ಹೆತ್ತತಾಯಿ ಮಗಳಿಗೆ ಹೊಡೆದ ಪ್ರಕರಣಕ್ಕೆ ರೋಚಕ ಟ್ವಿಸ್ಟ್

ಕೊಪ್ಪಳ: ಹೆತ್ತತಾಯಿ ಮಗಳಿಗೆ ಬಾಸುಂಡೆ ಬರೋ ಹಾಗೆ ಹೊಡೆದಿರೋ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಇದರಲ್ಲಿ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಭಂಟ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಶಾಮೀದ್ ಮನಿಯಾರ ಕೈವಾಡವಿದೆ ಅಂತ ಮಹಿಳೆ ಆರೋಪಿಸ್ತಿದ್ದಾರೆ.

ಕೊಪ್ಪಳದ ಗಂಗಾವತಿಯಲ್ಲಿ ಹತ್ತು ವರ್ಷದ ಹಿಂದೆ ಶರೀಫ್ ಹಾಗೂ ಫಾತೀಮಾ ಪ್ರೀತಿಸಿ ಅಂತರ್ಜಾತಿ ಮದುವೆಯಾಗಿದ್ರು. ಫಾತೀಮಾ ತನ್ನ ಮಗಳಾದ ಪರ್ವಿನ್ ಗೆ ಥಳಿಸಿರೋ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದೀಗ ಈ ಪ್ರಕರಣದಲ್ಲಿ ಪತಿ ಮೇಲೆಯೇ ಮಹಿಳೆ ಆರೋಪ ಮಾಡ್ತಿದ್ದಾರೆ.

ಪತಿ ಶರೀಫ್ ಮದುವೆಯಾದ ಬಳಿಕ ಕಿರುಕುಳ ಕೊಡಲು ಆರಂಭಿಸಿದ್ದ. ಜೊತೆಗೆ ಕುಟುಂಬ ನಿರ್ವಹಣೆಗಾಗಿ ಸಾಲ ಮಾಡಿರೋದನ್ನ ತೀರಿಸಲಾಗದೆ, ಸಾಲ ಕೊಟ್ಟಿರೋರ ಬಳಿ ಹಾಸಿಗೆ ಹಂಚಿಕೋ ಅಂತ ಪೀಡಿಸುತ್ತಿದ್ದ. ಶರೀಫ್ ತಂದೆಯೂ ಮಲಗಲು ಬಾ ಅಂತ ಕರೀತಿದ್ದ. ಈ ಎಲ್ಲಾ ಘಟನೆಗಳಿಂದ ಬೇಸತ್ತು ನಾನೇ ಶರೀಫ್‍ಗೆ ವಿಚ್ಛೇದನ ನೀಡಿದ್ದೆ. ಮೂರು ಮಕ್ಕಳನ್ನ ಕಟ್ಟಿಕೊಂಡು ಜೀವನ ಸಾಗಿಸ್ತಿದ್ದೇನೆ. ಇದನ್ನೇ ಬಂಡವಾಳ ಮಾಡಿಕೊಂಡ ಮಾಜಿ ನಗರಸಭೆ ಅಧ್ಯಕ್ಷ ಶಾಮೀದ್ ಮನಿಯಾರ, ನಿನಗೆ ಜೀವನ ಕೊಡ್ತೀನಿ. ನನ್ನೊಂದಿಗೆ ಇರು ಅಂತ ಕೇಳಿದ. ಅವನಿಗೆ ಛೀಮಾರಿ ಹಾಕಿದ್ದೇನೆ. ಆತನ ಮಾತಿಗೆ ಒಪ್ಪದಕ್ಕೆ ಈಗ ರೀತಿ ಮಾಡಿಸುತ್ತಿದ್ದಾರೆ ಅಂತ ಫಾತೀಮಾ ಆರೋಪಿಸಿದ್ದಾರೆ.

ಶರಿಫ್ ಇಲ್ಲಸಲ್ಲದ ಆರೋಪ ಮಾಡಿ ನನಗೆ ಅನೈತಿಕ ಸಂಬಂಧವಿದೆ ಅಂತ ಮಾಧ್ಯಮಗಳ ಮುಂದೆ ಹೇಳಿದ್ದ. ನಾನು ನನ್ನ ಮಗಳಿಗೆ ಹೊಡೆದಿದ್ದೆ. ಆದ್ರೆ ನನಗೆ ಯಾವ ಪ್ರಿಯಕರನೂ ಇಲ್ಲ. ಈ ಜೀವನವೇ ಬೇಡ ಅಂತ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದಾಗ ರಾಜಾಭಕ್ಷಿ ಅನ್ನೋವ್ರು ನನಗೆ ಧೈರ್ಯ ತುಂಬಿ ಸಹಾಯ ಮಾಡಿದ್ದಾರೆ. ಆದ್ರೆ ನನ್ನ ಪತಿ ಇವರೊಂದಿಗೆ ಸಂಬಂಧ ಕಲ್ಪಿಸಿದ್ದಾನೆ. ನಾನು ಮತ್ತು ಶರೀಫ್ ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದೆವು ಅಂತ ಫಾತೀಮಾ ಹೇಳಿದ್ದಾರೆ.

ಮೂಲತಃ ನಾನು ಹಿಂದೂ. ಮನೆಯವರ ವಿರೋಧದ ನಡುವೆಯೂ ಶರೀಫ್ ನನ್ನು ಮದುವೆಯಾದೆ. ಮದುವೆಯಾದ ಹತ್ತು ವರ್ಷಗಳಿಂದ್ಲೂ ಕಿರುಕುಳ ನೀಡುತ್ತಾ ಬಂದಿದ್ದಾರೆ. ಮುಸ್ಲಿಂ ಹಿರಿಯರ ಸಮ್ಮುಖದಲ್ಲೇ ವಿವಾಹ ವಿಚ್ಛೇದನ ಪಡೆದೆ. ಪ್ರತಿ ತಿಂಗಳು ಐದು ಸಾವಿರ ರೂ. ಜೀವನಾಂಶ ಕೊಡಬೇಕೆಂದು ಕೂಡಾ ತೀರ್ಮಾನವಾಗಿತ್ತು. ಇಲ್ಲಿಯವರೆಗೂ ನನಗೆ ಶರೀಫ್ ಹಣ ಕೊಟ್ಟಿಲ್ಲ. ನಾನು ಮಾನಸಿಕವಾಗಿ ನೊಂದಿದ್ದೇನೆ. ನನ್ನ ಮಗಳಿಗೆ ಹೊಡೆದಿರೋದನ್ನ ಮುಂದಿಟ್ಟುಕೊಂಡು ನನ್ನ ಮೂರು ಮಕ್ಕಳನ್ನ ನನ್ನಿಂದ ಕಿತ್ತುಕೊಂಡಿದ್ದಾರೆ. ದಯವಿಟ್ಟು ನನಗೆ ನನ್ನ ಮಕ್ಕಳನ್ನ ಕೊಡಿಸಿ ಅಂತ ಇದೀಗ ಮಹಿಳೆ ಅಂಗಲಾಚುತ್ತಿದ್ದಾರೆ.

Comments

Leave a Reply

Your email address will not be published. Required fields are marked *