ಮಗಳ ಸಾವಿನಿಂದ ನೊಂದು ರಕ್ತದಾನಕ್ಕಾಗಿಯೇ 3 ಸಾವಿರ ಜನರ 6 ವಾಟ್ಸಪ್ ಗ್ರೂಪ್ ಆರಂಭಿಸಿದ ಹಬೀಬ್

ವಿಜಯಪುರ: ಪ್ರತಿನಿತ್ಯ ಅದೆಷ್ಟೋ ಜನ ರಕ್ತ ಸಿಗದೆ ಸಾವನ್ನಪ್ಪುತ್ತಾರೆ. ಕೇಳಿದಷ್ಟು ಹಣ ಕೊಡಲು ಸಿದ್ಧವಿದ್ದರೂ ಕೆಲವೊಮ್ಮೆ ಬೇಕಾದ ರಕ್ತ ಸಿಗುವುದಿಲ್ಲ. ಆದರೆ ಇದಕ್ಕೆ ಪರಿಹಾರ ಕಂಡುಹಿಡಿಯುವ ಮೂಲಕ ವಿಜಯಪುರದ ಯುವಕರು ಹೊಸದೊಂದು ರಕ್ತ ಕ್ರಾಂತಿಯನ್ನೇ ಪ್ರಾರಂಭಿಸಿದ್ದಾರೆ. ಅವರೇ ನಮ್ಮ ಇವತ್ತಿನ ಪಬ್ಲಿಕ್ ಹೀರೋ.

ವಿಜಯಪುರದ ನಿವಾಸಿ ಹಬೀಬ್ ಎಂಬವರು ರಕ್ತ ಸಿಗದೇ ಪರದಾಡುವ ಜನರಿಗೆ ಒಂದು ಪರಿಹಾರ ಕಂಡುಹಿಡಿದಿದ್ದಾರೆ. ಹಬೀಬ್ ಸುಲ್ತಾನ್ ಗ್ರೂಪ್ ಹೆಸರಲ್ಲಿ ವಾಟ್ಸಪ್‍ನಲ್ಲಿ 6 ಗ್ರೂಪ್ ಪ್ರಾರಂಭಿಸಿದ್ದು, ಅದರಲ್ಲಿ 3 ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ. ರಕ್ತದ ಅವಶ್ಯಕತೆ ಇರುವವರು ಯಾವ ರಕ್ತ ಬೇಕು ಹಾಗೂ ಯಾವ ಆಸ್ಪತ್ರೆ ಎಂಬುದನ್ನು ಹಾಕಿದರೆ ಸಾಕು ಗ್ರ್ರೂಪ್‍ನಲ್ಲಿ ಇರುವವರು ತಕ್ಷಣ ಅವರಿಗೆ ಪ್ರತಿಕ್ರಿಯೆ ನೀಡಿ ಉಚಿತವಾಗಿ ರಕ್ತದಾನ ಮಾಡುತ್ತಾರೆ ಎಂದು ರಕ್ತದಾನಿ ಗ್ರೂಪ್‍ನ ಸದಸ್ಯ ಸುರೇಶ್ ಅವರು ಹೇಳಿದ್ದಾರೆ.

2012 ರಲ್ಲಿ ನನ್ನ ಮಗಳು ಡೆಂಗ್ಯೂನಿಂದ ಬಳಲುತ್ತಿದ್ದಳು. ಆಗ ರಕ್ತ ಸಿಗದೇ ಮಗಳನ್ನು ಕಳೆದುಕೊಂಡೆ. ನನಗಾದ ನೋವು ಯಾರಿಗೂ ಆಗಬಾರದು ಎಂಬ ಕಾರಣಕ್ಕೆ ನಾನು ಬ್ಲಡ್ ಬ್ಯಾಂಕ್ ಪ್ರಾರಂಭಿಸಿದೆ. ಈ ಬ್ಲಡ್ ಬ್ಯಾಂಕ್ ವಾಟ್ಸಪ್ ಗ್ರೂಪ್‍ನಲ್ಲಿ ವಿಜಯಪುರ, ಕಲಬುರ್ಗಿ, ಬಾಗಲಕೋಟೆ, ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಸದಸ್ಯರಿದ್ದಾರೆ ಎಂದು ರಕ್ತದಾನ ಗ್ರ್ರೂಪ್ ಸಂಸ್ಥಾಪಕ ಹಬೀಬ್ ಸುಲ್ತಾನ್ ತಿಳಿಸಿದ್ರು.

ಈ ಗ್ರೂಪ್‍ನಿಂದ ಅನೇಕ ಬಡವರಿಗೆ, ಅಸಹಾಯಕರಿಗೆ ಅನುಕೂಲವಾಗಿದೆ. ರಕ್ತವಿಲ್ಲದೇ ಪರದಾಡೋ ಎಷ್ಟೋ ಜನರಿಗೆ ದೀಪ ಹಚ್ಚಿದಂತಾಗಿದೆ. ಯಾರು ಎಷ್ಟೊತ್ತಲ್ಲಿ ರಕ್ತ ಕೇಳಿದ್ರೂ ಹಬೀಬ್ ತಂಡ ಹೋಗಿ ಕೊಡುತ್ತಾರೆ.

 

Comments

Leave a Reply

Your email address will not be published. Required fields are marked *