ಉತ್ತರ ಕರ್ನಾಟಕ ಸ್ಪೆಷಲ್ ಗಿರ್ಮಿಟ್ ಮಾಡಿ ನೋಡಿ

ಈಗಂತೂ ಪ್ರತಿದಿನ ಮಳೆ. ಇಂಥ ವೆದರ್‍ನಲ್ಲಿ ಬಿಸಿಬಿಸಿಯಾಗಿ ಏನಾದ್ರೂ ತಿನ್ನಬೇಕು ಅನ್ನಿಸುತ್ತದೆ. ಆದರೆ ಹೊರಗೆ ಹೋಗೋಣ ಅಂದರೆ ಮಳೆ. ಮನೆಯಲ್ಲಿ ಮಾಡೋಣ ಅಂದರೆ ಗೊತ್ತಿರೊ ತಿಂಡಿ ಮಾಡಿ ತಿಂದು ಬೇಜಾರು. ಹಾಗಾದರೆ ಇಲ್ಲಿದೆ ನೋಡಿ ಸಿಂಪಲ್ ಮತ್ತು ಸ್ಪೈಸಿ ಗಿರ್ಮಿಟ್ ಮಾಡೋ ವಿಧಾನ.

ಬೇಕಾಗಿರುವ ಸಾಮಾಗ್ರಿಗಳು:
1 ಮಂಡಕ್ಕಿ/ಕಡಲೆಪುರಿ – 3 ಕಪ್
2 ಹುಣಸೆ ರಸ – 1/4 ಕಪ್
3 ಟೊಮೇಟೊ – 1
4 ಈರುಳ್ಳಿ – 2
5 ಕೊತ್ತಂಬರಿ ಸೊಪ್ಪು – ಸ್ವಲ್ಪ
6 ಹುರಿಗಡಲೆ ಪುಡಿ – 2 ಚಮಚ
7 ಹಸಿರು ಮೆಣಸಿನಕಾಯಿ – 3
8 ಎಣ್ಣೆ – 2 ಚಮಚ
9 ಜೀರಿಗೆ – 2 ಚಮಚ
10 ಸಾಸಿವೆ – 2 ಚಮಚ
11 ಬೆಲ್ಲ- 2 ಚಮಚ
12 ಉಪ್ಪು- ರುಚಿಗೆ ತಕ್ಕಷ್ಟು
13 ಕರಿಬೇವು- ಸ್ವಲ್ಪ
14 ಅರಿಶಿಣ ಪುಡಿ – 1/4 ಚಮಚ
15 ಸೇವ್/ಖಾರ ಬೂಂದಿ

ಮಾಡುವ ವಿಧಾನ:
* ಒಂದು ಬಾಣಲೆಗೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಮೇಲೆ ಒಗ್ಗರಣೆಗೆ ಸಾಸಿವೆ, ಜೀರಿಗೆ ಹಾಕಿ.
* ನಂತರ ಸಣ್ಣಗೆ ಹಚ್ಚಿದ ಹಸಿರು ಮೆಣಸಿನಕಾಯಿ, ಕರಿಬೇವು ಹಾಕಿ ಸ್ವಲ್ಪ ಫ್ರೈ ಮಾಡಿ.
* ನಂತರ ಅರಿಶಿಣ ಮತ್ತು ಸಣ್ಣಗೆ ಹಚ್ಚಿದ ಈರುಳ್ಳಿಯಲ್ಲಿ ಮುಕ್ಕಾಲು ಭಾಗದಷ್ಟು ಹಾಕಿ 2 ನಿಮಿಷ ಫ್ರೈ ಮಾಡಿ.
* ಸ್ವಲ್ಪ ಹುಣಸೆರಸ ಮತ್ತು ಬೆಲ್ಲ ಹಾಕಿ ಮಿಕ್ಸ್ ಮಾಡಿ.
* ರುಚಿಗೆ ತಕ್ಕಂತೆ ಉಪ್ಪು ಹಾಕಿ 2 ನಿಮಿಷ ಕುದಿಸಿ, ಸ್ವಲ್ಪ ಗಟ್ಟಿಯಾದ ನಂತರ ಒಲೆಯಿಂದ ಕೆಳಗಿಳಿಸಿದ್ರೆ ಗಿರ್ಮಿಟ್ ಮಸಾಲಾ ರೆಡಿ.
* ಮತ್ತೊಂದು ಪಾತ್ರೆಯಲ್ಲಿ ಮಂಡಕ್ಕಿ ಹಾಕಿ ಅದಕ್ಕೆ ಗಿರ್ಮಿಟ್ ಮಸಾಲಾ, ಸಣ್ಣಗೆ ಕತ್ತರಿಸಿದ ಟೊಮೆಟೊ, ಉಳಿದಿರೋ ಈರುಳ್ಳಿ, 2 ಚಮಚ ಹುರಿಗಡಲೆ ಪುಡಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ.
* ಕೊನೆಯಲ್ಲಿ ಸ್ವಲ್ಪ ಸೇವ್/ ಖಾರ ಬೂಂದಿ ಉದುರಿಸಿ ಮಿರ್ಚಿ ಬಜ್ಜಿ ಜೊತೆಗೆ ಸವಿಯಲು ಕೊಡಿ.

 

Comments

Leave a Reply

Your email address will not be published. Required fields are marked *