ಹಾವೇರಿ: ಪ್ರವಾಹದಲ್ಲಿ ಸಿಲುಕಿದ ಆಟೋ ಚಾಲಕನನ್ನು ಪ್ರಾಣದ ಹಂಗು ತೊರೆದು ರಕ್ಷಸಿದ ಯುವಕ

ಹಾವೇರಿ: ರಾತ್ರಿಯಿಡೀ ನೀರಿನಲ್ಲಿ ಸಿಲುಕಿದ್ದ ಆಟೋ ಚಾಲಕನನ್ನ ಗ್ರಾಮಸ್ಥರು ರಕ್ಷಣೆ ಮಾಡಿದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಮೈದೂರು-ಯತ್ನಳ್ಳಿ ಗ್ರಾಮದ ಬಳಿ ನಡೆದಿದೆ.

ಮಂಗಳವಾರ ಸಂಜೆ ಸುರಿದ ಭಾರಿ ಮಳೆಗೆ ರೈತರ ಜಮೀನಿನ ನೀರು ಸೇರಿ ಹಳ್ಳ ತುಂಬಿ ರಭಸವಾಗಿ ಹರಿಯುತ್ತಿತ್ತು. ನೀರಿನ ರಭಸಕ್ಕೆ ತೇಲಿ ಹೋಗಿದ್ದ ಯುವಕನಿಗೆ ಮುಳ್ಳುಕಂಟೆ ಆಸರೆಯಾಗಿ ಸಿಕ್ಕಿತ್ತು. ಅದನ್ನು ಹಿಡಿದುಕೊಂಡು ಮುಳ್ಳುಕಂಟೆಯಲ್ಲಿ ಕುಳಿತು ರಿಕ್ಷಾ ಚಾಲಕ ಗಂಗಪ್ಪ ರಾತ್ರಿ ಕಳೆದಿದ್ದಾರೆ ಎಂದು ಹೇಳಲಾಗಿದೆ.

ಬೆಳಗ್ಗೆ ಹರಿಯುತ್ತಿರುವ ನೀರಿನ ಮಧ್ಯದ ಮುಳ್ಳುಕಂಟೆಯಲ್ಲಿ ಕುಳಿತಿದ್ದ ರಿಕ್ಷಾ ಚಾಲಕನನ್ನ ಕಂಡ ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ಗ್ರಾಮದ ಮಾರುತಿ ಎಂಬ ಯುವಕ ಸೇರಿ ಮೂವರು ಯುವಕರು ಪ್ರಾಣದ ಹಂಗು ತೊರೆದು ನೀರಿಗಿಳಿದು ರಿಕ್ಷಾ ಚಾಲಕನನ್ನ ರಕ್ಷಣೆ ಮಾಡಿದ್ದಾರೆ. ಯುವಕರ ಸಹಾಯದಿಂದ ಬದುಕಿ ಬಂದ ರಿಕ್ಷಾ ಚಾಲಕ ಗಂಗಪ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಮಾರುತಿ ಕಾರ್ಯಕ್ಕೆ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ನೀರಿನ ರಭಸಕ್ಕೆ ಇನ್ನೂ ಆಟೋ ರಿಕ್ಷಾ ಪತ್ತೆಯಾಗಿಲ್ಲ.

ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Comments

Leave a Reply

Your email address will not be published. Required fields are marked *