2 ರೂ.ಗೆ ಟೀ, ಕಾಫಿ,-5 ರೂ.ಗೆ ತಿಂಡಿ, ಊಟ-ಇದು ಸ್ವಾಮಿ ಕ್ಯಾಂಟೀನ್ ಸ್ಪೆಷಲ್

ಕೋಲಾರ: ರಾಜ್ಯದಲ್ಲಿ ಕ್ಯಾಂಟೀನ್ ಪೊಲಿಟಿಕ್ಸ್ ಭಾರೀ ಜೋರಾಗಿದೆ. ರಾಜ್ಯ ಸರ್ಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಗೊಳಿಸಿರುವ ಇಂದಿರಾ ಕ್ಯಾಂಟೀನ್ ಇತರೆ ಕಾಂಗ್ರೆಸ್ ಶಾಸಕರಿಗೂ ಪ್ರೇರಣೆಯಾಗಿದೆ.

ಜಿಲ್ಲೆಯ ಬಂಗಾರಪೇಟೆಯ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಇಂದು ಬಂಗಾರಪೇಟೆಯ ಕೆ.ಸಿ.ರೆಡ್ಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದಿರಾ ಕ್ಯಾಂಟೀನ್ ಮಾದರಿಯಲ್ಲೇ ಎಸ್.ಎನ್.ಕಾಂಟೀನ್ ಪ್ರಾರಂಭಿಸಿದ್ದಾರೆ. ಕ್ಯಾಂಟೀನ್ ನಲ್ಲಿ 2 ರೂ. ಗೆ ಟೀ, ಕಾಪೀ, 5 ರೂ. ಗೆ ತಿಂಡಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ.

ಬಂಗಾರಪೇಟೆಯಲ್ಲಿ ಇರುವ ಏಕೈಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದಾಗಿರೋದ್ರಿಂದ ಗಡಿ ಗ್ರಾಮಗಳಿಂದ ಬೆಳಗ್ಗೆಯೇ ಕಾಲೇಜಿಗೆ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಅವರಿಗೆ ತಿಂಡಿ ಹಾಗೂ ಊಟಕ್ಕೆ ತೊಂದರೆಯಾಗದಂತೆ ಶಾಸಕನಾಗಿ ಕ್ರಮ ಕೈಗೊಂಡಿದ್ದೇನೆ. ಕಾಲೇಜಿನಲ್ಲಿ ಸುಮಾರು 1200 ಪದವಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಕ್ಯಾಂಟೀನ್ ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳುತ್ತಾರೆ.

ರಾಜ್ಯದಲ್ಲಿ ಕ್ಯಾಂಟೀನ್ ಪಾಲೀಟಿಕ್ಸ್ ಸದ್ದು ಜೋರಾಗಿದೆ. ಮತದಾರರನ್ನ ಸೆಳೆಯಲು ಕಾಂಗ್ರೆಸ್‍ನಿಂದ ಇಂದಿರಾ ಕ್ಯಾಂಟೀನ್, ಜೆಡಿಎಸ್‍ನಿಂದ ಅಪ್ಪಾಜಿ ಕ್ಯಾಂಟೀನ್, ಕೋಲಾರದಲ್ಲಿ ಬಿಜೆಪಿಯಿಂದ ಶೆಟ್ಟಿ ಕ್ಯಾಂಟೀನ್ ಕೂಡ ಆಯ್ತು. ಈಗ ಮತ್ತೆ ಕಾಂಗ್ರೆಸ್ ಶಾಸಕರರಿಂದ ಇಂದಿರಾ ಕ್ಯಾಂಟೀನ್ ಮಾದರಿಯಲ್ಲೇ ಎಸ್.ಎನ್.ಕಾಂಟೀನ್ ಪ್ರಾರಂಭಿಸಿದ್ದಾರೆ.

Comments

Leave a Reply

Your email address will not be published. Required fields are marked *