ಕದ್ದೊಯ್ದ ಚಿನ್ನವನ್ನು ವಾಪಸ್ ತಂದು ಮನೆ ಮುಂದೆ ಎಸೆದು ಹೋದ್ರು

ಮಂಗಳೂರು: ಕದ್ದೊಯ್ದ ಚಿನ್ನವನ್ನು ಕಳ್ಳರೇ ಮರಳಿ ಮನೆಯ ಮುಂದೆ ಎಸೆದು ಹೋದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಶನಿವಾರದಂದು ಹಾಡಹಗಲೇ ಮಂಗಳೂರಿನ ಪಡೀಲ್ ಬಳಿಯ ಆಡುಮರೋಳಿಯಲ್ಲಿ ಶೇಖರ್ ಕುಂದರ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಸುಮಾರು 970 ಗ್ರಾಂ ಚಿನ್ನಾಭರಣ ಮತ್ತು 13 ಸಾವಿರ ನಗದು ಕಳವಾಗಿತ್ತು. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರು ಕಳ್ಳರ ಬಗ್ಗೆ ಶೋಧ ನಡೆಸುತ್ತಿರುವಂತೆಯೇ ಸೋಮವಾರ ಸಂಜೆ ಬೈಕ್ ನಲ್ಲಿ ಆಗಮಿಸಿದ ಆಗಂತುಕರಿಬ್ಬರು ಚಿನ್ನಾಭರಣಗಳನ್ನ ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಕಳವಾದ ಮನೆಯ ಮುಂಭಾಗದಲ್ಲಿ ಎಸೆದು ಹೋಗಿದ್ದಾರೆ.

ವಿಚಿತ್ರ ಅಂದ್ರೆ ಕಳವಾದ ಆಭರಣಗಳ ಪೈಕಿ ಬಹುತೇಕ ಪೂರ್ತಿ ಚಿನ್ನವನ್ನು ಕಳ್ಳರು ಮರಳಿಸಿದ್ದಾರೆ. ಈ ನಡುವೆ ಮನೆಯವರು ದೇವರಿಗೆ ಹರಕೆ ಹೇಳಿಕೊಂಡಿದ್ದೇ ಕಳ್ಳರು ಚಿನ್ನ ಮರಳಿಸಲು ಕಾರಣ ಎಂದು ನಂಬಿದ್ದಾರೆ. ಮನೆ ಮಾಲೀಕ ಶೇಖರ್ ಕುಂದರ್ ಗ್ಯಾರೇಜ್ ಹೊಂದಿದ್ದರೆ, ಪತ್ನಿ ತಿಲೋತ್ತಮೆ ಗಣಿ ಇಲಾಖೆಯಲ್ಲಿ ಸರ್ಕಾರಿ ಕೆಲಸದಲ್ಲಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಕಳ್ಳತನ ನಡೆದಿತ್ತು.

Comments

Leave a Reply

Your email address will not be published. Required fields are marked *