2ನೇ ತರಗತಿ ಬಾಲಕನನ್ನು ಕೊಂದಿದ್ದು ಶಾಲಾ ಬಸ್ ಕಂಡಕ್ಟರ್ – ಕಾರಣ ಕೇಳಿದ್ರೆ ಶಾಕ್ ಆಗ್ತೀರ

ಗುರ್ಗಾವ್: ಇಲ್ಲಿನ ಆರ್ಯನ್ ಇಂಟರ್‍ನ್ಯಾಷನಲ್ ಶಾಲೆಯಲ್ಲಿ 2ನೇ ತರಗತಿ ಬಾಲಕನ ಕತ್ತು ಸೀಳಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಬಸ್ ಕಂಡಕ್ಟರ್‍ನನ್ನು ಬಂಧಿಸಲಾಗಿದೆ. ಕೊಲೆ ಮಾಡಿರುವ ಬಗ್ಗೆ ಆರೋಪಿ ಒಪ್ಪಿಕೊಂಡಿದ್ದಾನೆ.

42 ವರ್ಷದ ಅಶೋಕ್ ಕುಮಾರ್ ಬಂಧಿತ ಆರೋಪಿ. ಈತ ಗುರ್ಗಾವ್‍ನ ಘಮ್‍ರೋಜ್ ಗ್ರಾಮದ ನಿವಾಸಿಯಾಗಿದ್ದು, ಆರ್ಯನ್ ಇಂಟರ್‍ನ್ಯಾಷನಲ್ ಶಾಲೆಯಲ್ಲಿ ಕಳೆದ 8 ತಿಂಗಳಿನಿಂದ ಕೆಲಸ ಮಾಡುತ್ತಿದ್ದ.

ಶುಕ್ರವಾರದಂದು ಶಾಲೆಯ ಟಾಯ್ಲೆಟ್‍ನಲ್ಲಿ 2ನೇ ತರಗತಿ ವಿದ್ಯಾರ್ಥಿಯಾದ 7 ವರ್ಷದ ಬಾಲಕನನ್ನು ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಮೃತದೇಹದ ಪಕ್ಕ ಚಾಕು ಪತ್ತೆಯಾಗಿತ್ತು.

ಕೊಲೆ ಮಾಡಿದ್ದು ಯಾಕೆ?: ಬಾಲಕ ಒಬ್ಬನೇ ಟಾಯ್ಲೆಟ್‍ನಲ್ಲಿ ಇದ್ದಾಗ ಆರೋಪಿ ಅಶೋಕ್ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಆದ್ರೆ ಬಾಲಕ ತಪ್ಪಿಸಿಕೊಳ್ಳಲು ಮುಂದಾದಾಗ ಅಶೋಕ್ ಆತನನ್ನು ಎಳೆದುಕೊಂಡು ಟಾಯ್ಲೆಟ್‍ನಲ್ಲೇ ಕತ್ತು ಸೀಳಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಬಾಲಕನನ್ನು ಎರಡು ಬಾರಿ ಇರಿದ ಅಶೋಕ್ ಚಾಕುವನ್ನ ನೀರಿನಲ್ಲಿ ತೊಳೆದು ಅಲ್ಲೇ ಎಸೆದುಹೋಗಿದ್ದಾನೆ.

ಬಾಲಕ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾದಾಗ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಇದೇ ಅಶೋಕ್ ಶಾಲಾ ಸಿಬ್ಬಂದಿಗೆ ಸಹಾಯ ಮಾಡಿದ್ದ. ಬಾಲಕನ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ನಡೆಸುವ ವೇಳೆ, ಅಶೋಕ್ ಟಾಯ್ಲೆಟ್‍ನೊಳಗೆ ಹೋಗೋದನ್ನ ನಾವು ನೋಡಿದ್ದೆವು ಎಂದು ಕೆಲವು ಮಕ್ಕಳು ಹೇಳಿಕೆ ನೀಡಿದ್ದರು. ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಪರೀಶಿಲಿಸಿದ ನಂತರ ಅನುಮಾನ ಮತ್ತಷ್ಟು ಬಲವಾಗಿತ್ತು.

ಶಾಲೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಾಲಕನ ತಂದೆ ತಮ್ಮ ವಕೀಲರೊಂದಿಗೆ ಗುರ್ಗಾವ್ ಪೊಲೀಸ್ ಆಯುಕ್ತರನ್ನ ಭೇಟಿಯಾಗಿದ್ದಾರೆ.

ನನ್ನ ಮಗನಿಗೆ ಕನಿಷ್ಠ ಭದ್ರತೆಯನ್ನು ಒದಗಿಸಲು ಶಾಲೆಗೆ ಸಾಧ್ಯವಾಗಿಲ್ಲ. ಹೀಗಾದ್ರೆ ಪೋಷಕರು ಮಕ್ಕಳನ್ನ ಶಾಲೆಗೆ ಹೇಗೆ ಕಳಿಸ್ತಾರೆ? ನನ್ನ ಮಗ ಶಾಲಾ ಬಸ್‍ನಲ್ಲಿ ಹೋಗುತ್ತಿರಲಿಲ್ಲ. ಹೀಗಾಗಿ ಆತನಿಗೆ ಆ ಕಂಡಕ್ಟರ್ ಯಾರು ಎಂದೇ ಗೊತ್ತಿರಲಿಲ್ಲ. ನಾವೇ ಮಗನನ್ನು ಡ್ರಾಪ್ ಮಾಡಿ ಪಿಕಪ್ ಮಾಡುತ್ತಿದ್ವಿ ಎಂದು ಬಾಲಕನ ತಾಯಿ ಜ್ಯೋತಿ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಶಾಲೆಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬಹುದೇ ಎಂದು ನೋಡಲು ಉಪ ಪೊಲೀಸ್ ಆಯುಕ್ತರು ತಂಡವನ್ನು ರಚಿಸಿದ್ದಾರೆ. ಇಂದು ಆರೋಪಿ ಅಶೋಕ್ ಕುಮಾರ್‍ನನ್ನು ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ.

Comments

Leave a Reply

Your email address will not be published. Required fields are marked *