ಶ್ರೀಲಂಕಾ ಪ್ರಧಾನಿಯ ಕೊಲ್ಲೂರು ಭೇಟಿ ರದ್ದಾಗಿದ್ದು ಯಾಕೆ?

ಉಡುಪಿ: ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರ ಭಾನುವಾರದ ಉಡುಪಿ ಪ್ರವಾಸ ರದ್ದಾಗಿದೆ. ಉಡುಪಿ ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣವಿದ್ದ ಹಿನ್ನೆಲೆಯಲ್ಲಿ ಲಂಕಾ ಪ್ರಧಾನಿಯವರ ಪ್ರವಾಸ ರದ್ದಾಗಿದೆ.

ಬೆಂಗಳೂರಿನಲ್ಲಿ ಶನಿವಾರದಿಂದ ತಂಗಿರುವ ರಾನಿಲ್ ವಿಕ್ರಮಸಿಂಘೆ ಅವರು ಇಂದು ಕೊಲ್ಲೂರು ದೇವಿಯ ದರ್ಶನ ಮಾಡಿ, ನವಚಂಡಿ ಮಹಾಯಾಗದಲ್ಲಿ ಪಾಲ್ಗೊಳ್ಳಬೇಕಿತ್ತು. ಕಳೆದ ರಾತ್ರಿ ನವಚಂಡಿಯಾಗಕ್ಕೆ ದೇವಳದ ಅರ್ಚಕರು ಸಿದ್ಧತೆ ಮಾಡಿದ್ದು ಪಾರಾಯಣ- ಹೋಮಗಳನ್ನು ತಯಾರಿ ಮಾಡಿದ್ದರು.

ಇಂದು ಪೂರ್ಣಾಹುತಿಗೆ ಎಲ್ಲಾ ಸಿದ್ಧತೆ ನಡೆದಿತ್ತು. ಹೆಲಿಪ್ಯಾಡ್‍ನಿಂದ 15 ಕಿಮೀ ದೂರದ ಕೊಲ್ಲೂರಿನವರೆಗೆ ಹೈ ಸೆಕ್ಯೂರಿಟಿ ನೀಡಲಾಗಿತ್ತು. ಆದರೆ ಮೋಡ ಮುಸುಕಿದ ವಾತಾವರಣವಿದ್ದ ಹಿನ್ನೆಲೆಯಲ್ಲಿ ಕುಂದಾಪುರದ ಅರೆ ಶಿರೂರಿನಲ್ಲಿ ಹೆಲಿಕಾಪ್ಟರ್ ಇಳಿಯಲು ಏರ್ ಫೋರ್ಸ್ ಅಧಿಕಾರಿಗಳು ಅನುಮತಿ ನೀಡಲಿಲ್ಲ. ಹೀಗಾಗಿ ಬೆಂಗಳೂರಿನಿಂದ ಹೆಲಿಕಾಪ್ಟರ್ ಟೇಕ್ ಆಫ್ ಆಗಿರಲಿಲ್ಲ.

ಇತ್ತ ಕೊಲ್ಲೂರಿನಲ್ಲಿ ಪ್ರಧಾನ ಅರ್ಚಕರೇ ಶ್ರೀಲಂಕಾ ಪ್ರಧಾನಿಗಳ ಹೆಸರಿನಲ್ಲಿ ಪೂರ್ಣಾಹುತಿ ಮಾಡಿದರು. ರಾನಿಲ್ ವಿಕ್ರಮ್‍ಸಿಂಘೆ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದು ಸೋಮವಾರ ಕೊಲ್ಲೂರಿಗೆ ಬರುವ ಬಗ್ಗೆ ಇಂದು ತೀರ್ಮಾನ ಕೈಗೊಳ್ಳಳಿದ್ದಾರೆ ಎನ್ನಲಾಗಿದೆ.

ಜಿಲ್ಲಾಧಿಕಾರಿ, ಎಸ್ಪಿ, ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು, ಕಳೆದೆರಡು ದಿನಗಳಿಂದ ಸಿದ್ಧತೆ ಮಾಡಿ ಇಂದು ಮಧ್ಯಾಹ್ನದವರೆಗೆ ಕಾದು ವಾಪಸ್ ಆದರು. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ನಾವು ಎಲ್ಲಾ ಭದ್ರತಾ ವ್ಯವಸ್ಥೆ ಮಾಡಿದ್ದೆವು. ಮೋಡ, ಮಳೆಯ ಕಾರಣ ಏರ್ ಫೋರ್ಸ್ ಅಧಿಕಾರಿಗಳು ಸಮ್ಮತಿ ಸೂಚಿಸಲಿಲ್ಲ ಎಂದರು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಉಪ್ಪುಂದ ಮಾತನಾಡಿ, ಪ್ರಧಾನಿಗಳ ಪರವಾಗಿ ಹೋಮ, ನವಚಂಡಿ ಮಹಾಯಾಗ ದೇವಿಗೆ ಸಲ್ಲಿಕೆಯಾಗಿದೆ. ವಿಶೇಷ ಪೂಜೆಯನ್ನೂ ಸಮರ್ಪಿಸಲಾಗಿದೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *