ರೆಸ್ಟೋರೆಂಟ್‍ ನ 2ನೇ ಮಹಡಿಯಿಂದ ಬಿದ್ದು ಮಾಜಿ ಸಚಿವರ ಪುತ್ರ ದುರ್ಮರಣ

ನವದೆಹಲಿ: ಮಣಿಪುರದ ಮಾಜಿ ಸಚಿವರೊಬ್ಬರ 19 ವರ್ಷದ ಪುತ್ರ ರೆಸ್ಟೋರೆಂಟ್ ನ ಎರಡನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ.

ಈ ಘಟನೆ ಭಾನುವಾರ ನಡೆದಿದ್ದು, ಮಣಿಪುರದ ಮಾಜಿ ಶಿಕ್ಷಣ ಸಚಿವ ಎಂ ಒಕೆಂಡ್ರು ಅವರ ಪುತ್ರ ಸಿದ್ಧಾರ್ಥ್ ಮೃತಪಟ್ಟ ಯುವಕ. ಈತ ವಿದ್ಯಾಭ್ಯಾಸಕ್ಕಾಗಿ ದೆಹಲಿಗೆ ಬಂದಿದ್ದು, ತನ್ನ ಸಹೋದರರ ಜೊತೆ ನೆಲೆಸಿದ್ದನು.

ಶನಿವಾರ ಸಂಜೆ ಸುಮಾರು 4.10ರ ಸುಮಾರಿಗೆ ರೆಸ್ಟೋರೆಂಟ್ ಮಹಡಿಯಿಂದ ವ್ಯಕ್ತಿಯೊಬ್ಬ ಬಿದ್ದಿದ್ದು, ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಂತ ಹಿರಿಯ ಪೊಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದ್ರೆ ಇದೊಂದು ಕೊಲೆ ಅಂತ ಸಿದ್ದಾರ್ಥ್ ಸಹೋದರಿ ಆರೋಪ ಮಾಡುತ್ತಿದ್ದಾರೆ.

ಸಿದ್ದಾರ್ಥ್ ನ ಡ್ರೈವರ್ ಆತನನ್ನು ಕಾರಿನಲ್ಲಿ ರೆಸ್ಟೋರೆಂಟ್ ಬಳಿ ಬಿಟ್ಟು ಬಳಿಕ ಡ್ರೈವರ್ ತೆರಳಿರುವುದನ್ನು ಪೊಲೀಸರು ನೋಡಿದ್ದಾರೆ ಆ ಬಳಿಕ ಈ ಘಟನೆ ನಡೆದಿದೆ.

ಘಟನೆಯ ದಿನ ಸಿದ್ದಾರ್ಥ್ ಮದ್ಯ ಸೇವಿಸಿದ್ದು, ರೆಸ್ಟೋರೆಂಟ್ ಮಹಡಿಗೆ ತೆರಳಿ ಗೋಡೆ ಮೇಲೆ ಹತ್ತಿ ಅಲ್ಲಿಂದ ಹಾರಲು ಪ್ರಯತ್ನಿಸಿದ್ದಾನೆ. ಇದನ್ನು ಗಮನಿಸಿದ ರೆಸ್ಟೋರೆಂಟ್ ವೈಟರ್ ಕೂಡಲೇ ಸಿದ್ದಾರ್ಥ್‍ಗೆ ಇಳಿಯುವಂತೆ ತಿಳಿಸಿದ್ದಾರೆ. ಅಂತೆಯೇ ಗೋಡೆಯಿಂದ ಇಳಿದ ಆತ ಸಂಧಿಯಲ್ಲಿದ ಕಂಬಿಯಿಂದ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಪರಿಣಾಮ ಆತನ ತಲೆಗೆ ಗಂಭಿರ ಗಾಯಗಳಾಗಿತ್ತು. ಕೂಡಲೇ ಸ್ಥಳೀಯರು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಅದಾಗಲೇ ಆತ ಮೃತಪಟ್ಟಿದ್ದಾನೆ ಅಂತ ವೈದ್ಯರು ತಿಳಿಸಿರುವುದಾಗಿ ಹೇಳಿದ್ರು.

ಸದ್ಯ ಘಟನೆಯ ಬಗ್ಗೆ ತನಿಖೆ ನಡೆಸುತ್ತಿರೋ ಪೊಲೀಸರು ರೆಸ್ಟೋರೆಂಟ್ ನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸುತ್ತಿದ್ದಾರೆ. ಈತ ರೆಸ್ಟೋರೆಂಟ್ ಗೆ ಒಬ್ಬನೇ ಬಂದಿದ್ದನು ಅಂತ ಅವರು ಹೇಳಿದ್ದಾರೆ.

 

Comments

Leave a Reply

Your email address will not be published. Required fields are marked *