ನೇಣು ಬಿಗಿದುಕೊಂಡು ತಾಯಿ-ಮಗಳು ಆತ್ಮಹತ್ಯೆ

ಬೆಂಗಳೂರು: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ತಾಯಿ ಮಗಳು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

ಸಿಂಧೂ (34), ದೀಪ್ತಿ (17) ಆತ್ಮಹತ್ಯೆ ಮಾಡಿಕೊಂಡ ತಾಯಿ ಮಗಳು. ಆನೇಕಲ್ ತಾಲೂಕಿನ ಅತ್ತಿಬೆಲೆ ಗ್ರಾಮದ ಕುಮಾರ್ ಲೇಔಟ್ ನಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ.

ಸಿಂಧೂ ಗಂಡ ರಾಜಶೇಖರ ರೆಡ್ಡಿ ದಕ್ಷಿಣ ಆಫ್ರಿಕಾದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಎರಡು ಮೂರು ತಿಂಗಳಿಗೊಮ್ಮೆ ರಾಜಶೇಖರ್ ರೆಡ್ಡಿ ಊರಿಗೆ ಬಂದು ಹೆಂಡತಿ ಹಾಗೂ ಮಗಳನ್ನು ನೋಡಿಕೊಂಡು ಹೋಗುತ್ತಿದ್ದರು. ಇದರಿಂದ ಸಿಂಧೂ ಖಿನ್ನತೆಗೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಆರು ತಿಂಗಳ ಹಿಂದೆಯಷ್ಟೇ ಅತ್ತಿಬೆಲೆಯ ಕುಮಾರ್ ಲೇಔಟ್ ಗೆ ಶಿಫ್ಟ್ ಆಗಿದ್ದ ತಾಯಿ ಮಗಳು ಗುರುವಾರ ರಾತ್ರಿ ಮನೆಯ ಸೀಲಿಂಗ್ ನಲ್ಲಿದ್ದ ಕಬ್ಬಿಣದ ಹುಕ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಿಂಧೂ ತಾಯಿ ಶಾಂತಮ್ಮ ಸಿಂಧೂ ಮೊಬೈಲ್ ಗೆ ಕರೆ ಮಾಡಿದರೂ ಸ್ವಿಕರಿಸದಿದ್ದರಿಂದ ಅನುಮಾನಗೊಂಡು ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸದ್ಯ ತಾಯಿ-ಮಗಳ ಶವಗಳನ್ನು ನಗರದ ವಿಕ್ಟೋರಿಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *